ಬೆಂಗಳೂರು: ಬಿಬಿಎಂಪಿ ವತಿಯಿಂದ ಕೆಂಗೇರಿ ಸಮೀಪದ ಹೇರೋಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಸಾವಯವ ಗೊಬ್ಬರ ಸಂತೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಹಸಿ, ಒಣಕಸ ವಿಂಗಡಣೆ, ಮನೆಯಲ್ಲೇ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ವಿಧಾನ, ಮನೆಗಳ ಟೆರೇಸ್ ಮೇಲೆ ಕೈತೋಟ ನಿರ್ಮಾಣ, ಮಳೆನೀರು ಸಂಗ್ರಹದ ಬಗ್ಗೆ ಮಾಹಿತಿ ನೀಡಲಾಯಿತು.
ಹಸಿಕಸದಿಂದ ಅಡುಗೆ ಅನಿಲ ಉತ್ಪಾದಿಸುವ ಹಾಗೂ ಕಸದಿಂದ ಸಾವಯವ ಗೊಬ್ಬರ ತಯಾರಿಸುವ ಉಪಕರಣಗಳು, ಪೇಪರ್ನಿಂದ ತಯಾರಿಸಿದ ಪೆನ್ಸಿಲ್, ಆಲೂಗಡ್ಡೆಯಿಂದ ತಯಾರಿಸಿದ ಕವರ್ಗಳು ಗಮನ ಸೆಳೆದವು.
ಅಂಟುವಾಳ ಸಸ್ಯದಿಂದ ತಯಾರಿಸಿದ ರಾಸಾಯನಿಕರಹಿತ ಸೋಪ್ಗಳು, ಮೂರು ವರ್ಷಗಳವರೆಗೆ ಉಪಯೋಗಿಸಬಹುದಾದ ಡೈಪರ್ಗಳು, ದೀರ್ಘ ಕಾಲ ಬಾಳಿಕೆ ಬರುವ ನೈಸರ್ಗಿಕ ಪ್ಯಾಡ್ಗಳು ಗ್ರಾಹಕರನ್ನು ಆಕರ್ಷಿಸಿದವು.
ಪಾಲಿಕೆ ಸದಸ್ಯ ರಾಜಣ್ಣ ಮಾತನಾಡಿ, ‘ವಾರ್ಡ್ ಮಟ್ಟದಲ್ಲಿ ಸಾವಯವ ಗೊಬ್ಬರ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ’ ಎಂದರು.
ಪರಿಸರ ಪ್ರೇಮಿ ವೀಣಾ ರಾಚಪ್ಪ, ‘ಕಸ ವಿಂಗಡಣೆ, ಸಾವಯವ ಗೊಬ್ಬರ ತಯಾರಿಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ’ ಎಂದು ಹೇಳಿದರು.
ಕಸದಿಂದ ಸಾವಯವ ಗೊಬ್ಬರ ತಯಾರಿಸುವ ಕುರಿತು ಕಲಾವಿದ ವಿಜಯ್ ಹಾಗೂ ತಂಡವು ಬೀದಿ ನಾಟಕದ ಮೂಲಕ ಅರಿವು ಮೂಡಿಸಿತು.