ಕುಶಾಲನಗರ: ಕೊಡಗು ಜಿಲ್ಲಾಡಳಿತ ತಾಲ್ಲೂಕಿನ ಮದಲಾಪುರ ಬಳಿ ಬ್ಯಾಡಗುಟ್ಟದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಸೇರಿ ಮೂಲಸೌಲಭ್ಯ ಕಲ್ಪಿಸಿದೆ.
ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶ ದಿಂದ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಉಸ್ತುವಾರಿಯಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ತಾತ್ಕಾಲಿಕ ವಸತಿ ಸೇರಿ ಎಲ್ಲ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಗಿರಿಜನ ಅಭಿವೃದ್ಧಿ ಸಂಸ್ಥೆ ಅಧಿಕಾರಿ ಪ್ರಕಾಶ್ ತಿಳಿಸಿದರು.
ಬ್ಯಾಡಗುಟ್ಟ ಗ್ರಾಮದಲ್ಲಿ ನಿರಾಶ್ರಿತರಿಗೆ ಸೌಲಭ್ಯದ ಕಲ್ಪಿಸಿರುವ ಬಗ್ಗೆ ಅಪಸ್ವರ ವ್ಯಕ್ತವಾಗಿದೆ. ಗಿರಿಜನ ಮುಖಂಡೆ ಮುತ್ತಮ್ಮ, ‘ಸರಿಯಾಗಿ ಸೌಲಭ್ಯ ಕಲ್ಪಿಸಿಲ್ಲ. ಕೇಳಿದರೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಹೇಳಿದರು.
ತಾ.ಪಂ ಸಹಾಯಕ ನಿರ್ದೇಶಕ ಸುನೀಲ್, ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಕಂದಾಯ ಅಧಿಕಾರಿ ನಂದ ಕುಮಾರ್, ಬವಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎನ್.ಎನ್. ರಾಜಾರಾವ್, ನಿರ್ದೇಶಕ ಮೋಹನ್, ಪಿಡಿಒ ರವೀಶ್ ಹಾಜರಿದ್ದರು.