ತೇಜಪುರದಲ್ಲಿ ಗೋಳೀಬಾರ್: ಮೂವರ ಸಾವು
ಷಿಲ್ಲಾಂಗ್, ಮೇ 8– ಅಸ್ಸಾಂ ರಾಜ್ಯದ ದರಾಂಗ್ ಜಿಲ್ಲೆಯ ಕೇಂದ್ರವಾದ ತೇಜಪುರದಲ್ಲಿ ಇಂದು ಬೆಳಿಗ್ಗೆ ವಿದ್ಯಾರ್ಥಿಗಳೇ ವಿಶೇಷವಾಗಿದ್ದ ಗುಂಪೊಂದರ ಮೇಲೆ ಪೋಲೀಸರು ಗುಂಡು ಹಾರಿಸಿದ ಕಾರಣ ಮೂವರು ಮಡಿದು ಹನ್ನೆರಡು ಮಂದಿ ಗಾಯಗೊಂಡರೆಂದು ಇಲ್ಲಿಗೆ ಅಧಿಕೃತ ಸುದ್ದಿ ಬಂದಿದೆ.
ಮಡಿದವರಲ್ಲಿ 8 ವರ್ಷದ ಬಾಲಕನೊಬ್ಬ ಮತ್ತು ಇಬ್ಬರು ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಮತ್ತು ಒಬ್ಬ ಪೋಲೀಸ್ ನೌಕರನ ನಡುವೆ ಆದ ವಾಗ್ವಾದವೇ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವೆಂದೂ, ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೋಲೀಸರು ಅನೇಕ ಸುತ್ತು ಗುಂಡುಗಳನ್ನು ಹಾರಿಸಿದರೆಂದೂ ವರದಿ ತಿಳಿಸಿದೆ.
ಕಲ್ಲೇ ಆಹಾರ
ಜಯಪುರ, ಮೇ 8– ಕಲ್ಲು ತಿಂದು ಅರಗಿಸಿಕೊಳ್ಳಲು ಸಾಧ್ಯವೆ? ಅದಕ್ಕೆ ಉತ್ತರ ನೀಡುವ ವ್ಯಕ್ತಿಯೊಬ್ಬ ದೊರಕಿದ್ದಾನೆ. ರಾಜಾಸ್ತಾನದ ಬಿಕನೀರ್ನಲ್ಲಿರುವ ರಾಜಕುಮಾರ ವಿಜಯ ಸಿಂಗ್ ಸ್ಮಾರಕ ಆಸ್ಪತ್ರೆಯಲ್ಲಿ ಒಬ್ಬ ರೋಗಿಯಿದ್ದಾನೆ. ಕಳೆದ 6 ವರ್ಷಗಳಿಂದ ಈತನ ಆಹಾರ ಕಲ್ಲು.
ಪ್ರತಿನಿತ್ಯ ಆತ 250 ಗ್ರಾಂ ಕಲ್ಲು ಸೇವಿಸುತ್ತಿದ್ದನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಹೊಸ ರಾಷ್ಟ್ರಪತಿ 13 ರಂದು ಅಧಿಕಾರಕ್ಕೆ
ನವದೆಹಲಿ, ಮೇ 8– ನಾಳೆ ಪ್ರಕಟವಾಗಲಿರುವ ರಾಷ್ಟ್ರಪತಿ ಚುನಾವಣಾ ಫಲಿತಾಂಶದ ನಂತರ, ಆಯ್ಕೆಯಾಗುವ ನೂತನ ರಾಷ್ಟ್ರಪತಿಯವರು ಮೇ 13ರ ಶನಿವಾರ ಬೆಳಿಗ್ಗೆ 8.30ಕ್ಕೆ ಪಾರ್ಲಿಮೆಂಟ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಳ್ಳುವರು.