ಬೆಂಗಳೂರು: ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಹುಕ್ಕಾ ಬಾರ್ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಟ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ನಟ ಅರುಣ್ಗೌಡ, ಸಂಗಪ್ಪ ಹಾದಿಮನಿ, ಮಂಜುನಾಥ್, ಮಹೇಶ್ ಬಾಬು, ನಾಗಪ್ಪ, ಮನೀಶ್ ವೀರೇಶ್ ಶೆಟ್ಟಿ ಮತ್ತು ವೀನಿಶಿತ್ ಬಂಧಿತರು. ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ್ ಗೌಡ ಹುಕ್ಕಾ ಬಾರ್ನ ಮಾಲೀಕರಾಗಿದ್ದು, ಇವರು ‘ಚಾರ್ಕೋಲ್ ಕೆಫೆ’ ಎಂಬ ಹೆಸರಿನಲ್ಲಿ ಬಾರ್ ನಡೆಸುತ್ತಿದ್ದರು. ಇದೇ ಕೆಫೆಯಲ್ಲಿ ಹುಕ್ಕಾ ಸೇದಲು ಅವಕಾಶ ಮಾಡಿಕೊಟ್ಟಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದರು.
ಬಂಧಿತರು, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಅಪ್ರಾಪ್ತರಿಗೆ ಹುಕ್ಕಾ ಸೇದುವಂತೆ ಪ್ರೋತ್ಸಾಹಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸ
ಲಾಗಿದೆ. ಠಾಣಾ ಜಾಮೀನು ಪಡೆದು ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಹುಕ್ಕಾ ಮಾರಾಟಕ್ಕೆ ಸುಪ್ರೀಂಕೋರ್ಟ್ ಕೆಲ ನಿಯಮಗಳನ್ನು ರೂಪಿಸಿದೆ. ಆದರೆ, ಅರುಣ್ ಅವರು ಈ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದರು.
ನಟ ಅರುಣ್ ಗೌಡ ಅವರು ‘ಮುದ್ದು ಮನಸೇ’, ‘ನಾನು ನಮ್ ಹುಡ್ಗಿ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು.
ಖಾಸಗಿ ವಾಹಿನಿಯ ರಿಯಾಲಿಟಿ ಷೋವೊಂದರಲ್ಲೂ ಅವರು ಸ್ಪರ್ಧಿಸಿದ್ದರು.
**
ಮಹಿಳೆಯ ಮುಖಕ್ಕೆ ಫೆವಿಕ್ವಿಕ್!
ಬಸವನಗುಡಿಯ ರಾಮಮಂದಿರದ ಬಳಿ ಮಂಗಳವಾರ ಬೆಳಿಗ್ಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಇಬ್ಬರು ಮಹಿಳೆಯರು ಸರಸ್ವತಿ (45) ಎಂಬುವರ ಮುಖದ ಮೇಲೆ ಫೆವಿಕ್ವಿಕ್ ಗಮ್ ಸುರಿದು ಪರಾರಿಯಾಗಿದ್ದಾರೆ.
ಸರಸ್ವತಿ ಅವರ ಮುಖದ ಚರ್ಮ ಸುಟ್ಟು ಹೋಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾಗಿರುವ ಮಹಿಳೆಯರಿಗಾಗಿ ಶೋಧ ನಡೆಯುತ್ತಿದೆ ಎಂದು ಬಸವನಗುಡಿ ಪೊಲೀಸರು ಹೇಳಿದ್ದಾರೆ.