ನರಗುಂದ: ಬರ ತಾಂಡವಾಡುತ್ತಿದೆ, ಕೈಯಲ್ಲಿ ಉದ್ಯೋಗವಿಲ್ಲ. ಕೆಲಸ ಮಾಡಿದರೂ ಎರಡು ತಿಂಗಳಿನ ಉದ್ಯೋಗಖಾತ್ರಿ ವೇತನವನ್ನು ಪಾವತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ತಾಲ್ಲೂಕಿನ ಭೈರನಹಟ್ಟಿಯ ಗ್ರಾಮಸ್ಥರು ಮಂಗಳವಾರ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವೇತನ ಪಾವತಿಸದೇ ಇರುವುದಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಾನುವಾರುಗಳಿಗೆ ಮೇವಿಲ್ಲ, ಜನರಿಗೆ ಉದ್ಯೋಗವಿಲ್ಲ ಇದರಿಂದ ವಲಸೆ ಹೋಗುವಂತಾಗಿ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೂಡಲೇ ಉದ್ಯೋಗ ನೀಡಬೇಕು. ಜನರ ಸಂಕಷ್ಟ ಪರಿಹರಿಸಬೇಕು. ಇಲ್ಲವಾದರೆ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ನಿತ್ಯ ಜೀವನಕ್ಕೂ ಅಲೆದಾಡಬೇಕಿದೆ. ಒಂದು ವಾರದಲ್ಲಿ ಉದ್ಯೋಗ ನೀಡದಿದ್ದರೆ ಗ್ರಾಪಂ ಎದುರು ನಿತ್ಯ ಧರಣಿ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾರ್ಚ್ ಕೊನೆಯಾಗಿದ್ದರಿಂದ ಅನುದಾನ ಬರಬೇಕಿದೆ. ಇದರ ಮೂಲಕ ಉದ್ಯೋಗ ನೀಡಲಾಗುವುದು ಎಂದರು.