ಗಜೇಂದ್ರಗಡ: ರಾಜ್ಯ ಸರ್ಕಾರವು 7 ನೇ ವೇತನ ಆಯೋಗವನ್ನು ತಕ್ಷಣ ರಚಿಸಿ, ಅಧ್ಯಕ್ಷರನ್ನು ನೇಮಕಮಾಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿರುವ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸರ್ಕಾರಿ ನೌಕರರಿಗೆ ನೀಡುವ ವೇತನದಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ಕಾರಣ ರಾಜ್ಯ ಸರ್ಕಾರವು ಕೇಂದ್ರದ ಮಾದರಿಯಲ್ಲಿ ವೇತನ ನೀಡಬೇಕುಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ತುಲನೆ ಮಾಡಿದಾಗ ಬಹಳಷ್ಟು ತಾರತಮ್ಯ ಕಾಣುತ್ತದೆ. ಈ ವೇತನವು ಕೇಂದ್ರಕ್ಕಿಂತ ಶೇ 48 ರಷ್ಟು ಕಡಿಮೆ ಇದೆ ಎಂದರು.
2012ರಲ್ಲಿ 6ನೇ ವೇತನ ಆಯೋಗ ಸೌಲಭ್ಯ ದೊರೆತ 5 ವರ್ಷದ ನಂತರ 7 ಆಯೋಗವು ಜಾರಿ ಆಗಬೇಕು.
ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ ಸೇರಿದಂತೆ ಉತ್ತರ ಭಾರತದ ಹಲವಾರು ರಾಜ್ಯಗಳು ಕೇಂದ್ರ ಮಾದರಿಯ ವೇತನವನ್ನು ನೀಡುತ್ತಿವೆ. ಆದರೆ, ಇಂದು ನಮ್ಮ ರಾಜ್ಯವು ನೀಡುವ ವೇತನ ಶ್ರೇಣಿಯಲ್ಲಿ ಬಹಳ ಅಂತರವಿದೆ ಎಂದು ಹೇಳಿದರು.ಕೇಂದ್ರದಂತೆ ರಾಜ್ಯವೂ ಮನೆ ಭಾಡಿಗೆ ಭತ್ಯೆಯನ್ನು ನ್ಯಾಯಬದ್ದವಾಗಿ ನೀಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರೋಣ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ವಿ.ಹಾದಿಮನಿ, ರೋಣ ತಾಲ್ಲೂಕು ಕಸಾಪ ಅಧ್ಯಕ್ಷ ಐ.ಎ.ರೇವಡಿ, ಎಂ.ಎಸ್.ಕುರಿ, ವಿ.ಎನ್.ಭಜಿ, ಎ.ಕೆ.ವಂಟಿ, ಎಸ್.ಎಸ್.ಬಾರಡ್ಡಿ, ಜಿ.ಎಸ್.ವಡ್ಡರ, ಬಿ.ಸಿ.ಅಂಗಡಿ, ಎಸ್.ಎ.ಜಿಗಳೂರ, ಬಿ.ಎನ್.ಜಡಿದೆಲಿ, ಐ.ಆರ್.ಅಕ್ಕಿ ಇದ್ದರು.