ಹಾನಗಲ್: ಇಲ್ಲಿನ ಕುಮಾರೇಶ್ವರ ಬಿ.ಎಡ್ ಕಾಲೇಜಿನಲ್ಲಿ ಕಲಿತ 2002–03ನೇ ಸಾಲಿನ ವಿದ್ಯಾರ್ಥಿಗಳಿಗೆ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ಚವನ ನೀಡಿದ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ‘ವಿದ್ಯೆ ಕಲಿಸಿದ ಗುರುಗಳ ಸ್ಮರಣೆ ಮತ್ತು ಅವರು ಬೋಧಿಸಿದ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಅರ್ಥದಲ್ಲಿ ಗುರುವಂದನೆ’ ಎಂದರು.
‘ವಿದ್ಯಾರ್ಥಿ ದೆಸೆಯಿಂದ ಅನುಸರಿಸಿದ ಆದರ್ಶಗಳು, ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ನಡೆದಾಗ ಜೀವನದ ಸಾರ್ಥಕತೆ ಆಗುತ್ತದೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸದಾಶಿವಪ್ಪ.ಎನ್, ‘ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಂಡ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಭವಿಷ್ಯದಲ್ಲಿ ಯಶಸ್ಸು ಪಡೆಯಲು
ತಂದು ಕೊಡುತ್ತವೆ. ಗುರು–ಶಿಷ್ಯರ ಸಂಬಂಧ ಪವಿತ್ರವಾಗಿದೆ. ಅದು ಚಿರಕಾಲ ಉಳಿಯಬೇಕು’ ಎಂದರು.
‘ಎಲ್ಲ ವಿದ್ಯಾರ್ಥಿಗಳು ಗುರುವಿಗೆ ಅಚ್ಚುಮೆಚ್ಚು, ಗುರುವಿನ ಪ್ರೀತಿಯನ್ನು ಗಳಿಸಿ ನಿರಂತರ ಪ್ರಯತ್ನ, ಪರಿಶ್ರಮದಿಂದ ವಿದ್ಯಾರ್ಥಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಕಾಲೇಜಿನ ಉಪನ್ಯಾಸಕ ಡಾ.ಬಿ.ಎಸ್.ರುದ್ರೇಶ ಅಭಿಪ್ರಾಯಪಟ್ಟರು. ಹರಿಹರ ಶಿಕ್ಷಣ ಮಹಾವಿದ್ಯಾಲಯದ ವೆಂಕಟೇಶ ಕೆ. ಮಾತನಾಡಿದರು.
ಹಳೆಯ ವಿದ್ಯಾರ್ಥಿ ಮಲ್ಲಪ್ಪ.ಜಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಹಳೆಯ ವಿದ್ಯಾರ್ಥಿಗಳಾದ ಗೋಜನೂರಿನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ, ತರಿಕೆರಿಯ ಶಾಲೆಯ ಮುಖ್ಯ ಶಿಕ್ಷಕಿ ಸೌಮ್ಯ.ಇ.ಟಿ ಮಾತನಾಡಿದರು.