ಕುಶಾಲನಗರ: ಕೊಡಗು ಜಿಲ್ಲಾಡಳಿತ ದಿಂದ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಬಳಿಯ ಬ್ಯಾಡಗೂಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.
ಬ್ಯಾಡಗೂಟ್ಟ ಗ್ರಾಮದಲ್ಲಿ ಸಮುದಾಯ ಭವನ ದುರಸ್ತಿ ಮಾಡಲಾಗಿದ್ದು, ಅದರ ಪಕ್ಕದಲ್ಲಿಯೇ ಹೊಸದಾಗಿ ಶೆಡ್ ಗಳನ್ನು ನಿರ್ಮಾಣ ಮಾಡಲಾಗಿದೆ. ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.
ಬ್ಯಾಡಗೂಟ್ಟದಲ್ಲಿರುವ ಸುಮಾರು 450 ಕುಟುಂಬಗಳಿಗೆ ಬುಧವಾರ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)ಯಿಂದ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಅಲ್ಲದೆ ತಾತ್ಕಾಲಿಕವಾಗಿ ಮನೆ ನಿರ್ಮಿಸಿಕೊಳ್ಳಲು ಬಿದಿರಿನ ಬಂಬೂ ಹಾಗೂ ಟಾರ್ಪಾಲಿನ್ ಸೇರಿದಂತೆ ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅಧಿಕಾರಿ ಪ್ರಕಾಶ್, ತಾಲ್ಲುಕು ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಕಂದಾಯ ಅಧಿಕಾರಿ ನಂದಕುಮಾರ್, ಬವಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎನ್.ಎನ್. ರಾಜಾರಾವ್ ಇದ್ದರು.