ಭಾರತೀನಗರ: ‘ಮನರಂಜನೆ ಕೊಡು ತ್ತಿದ್ದ ಹಲವು ಗ್ರಾಮೀಣ ಕಲೆಗಳು ಯುವಕರ ನಿರಾಸಕ್ತಿಯಿಂದ ಕಣ್ಮರೆ ಯಾಗುತ್ತಿವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಸ್.ರಾಜೀವ್ ಹೇಳಿದರು.
ಸಮೀಪದ ಚಿಕ್ಕರಸಿನಕೆರೆ ಗ್ರಾಮದಲ್ಲಿ ಕಾಲಭೈರವೇಶ್ವರ ಕಲಾ ಬಳಗ ಬುಧವಾರ ಆಯೋಜಿಸಿದ್ದ ‘ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ’ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವ ಜನರಿಗೆ ಗ್ರಾಮೀಣ ಕಲಾಸಕ್ತಿ ಕಡಿಮೆಯಾಗುತ್ತಿದೆ. ಚಲನಚಿತ್ರಗಳತ್ತ ಚಿತ್ತ ಹರಿಸುತ್ತಿದ್ದಾರೆ. ಇದರಿಂದ ಮುಂದೊಂದು ದಿನ ಕಲೆಗಳನ್ನು, ಕಲಾವಿದರನ್ನು ಹುಡುಕಬೇಕಾದ ಪರಿಸ್ಥಿತಿ ಬರಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೋಗೀಗೌಡ ಮಾತನಾಡಿ, ‘ಹಳ್ಳಿಗಳ ಜನರು ಸಾಮರಸ್ಯದಿಂದ ಜೀವನ ನಡೆಸಲು ನಾಟಕಗಳು ಅವಶ್ಯ. ಆಗಾಗ್ಗೆ ಇಂತಹ ಕಾರ್ಯಕ್ರಮಗಳು ನಡೆದರೆ ಎಲ್ಲರು ಒಗ್ಗಟ್ಟಾಗಿ ಒಂದೆಡೆ ಸೇರಲು, ನೋವು ನಲಿವು ಹಂಚಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದರು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎ.ಕೆರೆ ಪ್ರಕಾಶ್, ತಾ.ಪಂ. ಸದಸ್ಯ ಗಿರೀಶ್, ಮಾಜಿ ಸದಸ್ಯ ಭರತೇಶ್, ಸಿ.ಎ.ಕೆರೆ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಮುಖಂಡರಾದ ಯಡಗನಹಳ್ಳಿ ಪುಟ್ಟೇಗೌಡ, ಹಳ್ಳಿಕೆರೆ ರಾಮಲಿಂಗೇಗೌಡ, ಯಜಮಾನ್ ಶಿವಲಿಂಗೇಗೌಡ, ಪ್ರಸಾದ್ ಅಣ್ಣೂರು ಸಿದ್ದರಾಜು ಇದ್ದರು.