ಬೆಳ್ತಂಗಡಿ: ಬೇರೆ ಬೇರೆ ಜಾತಿ ವ್ಯವಸ್ಥೆಯ ಮಧ್ಯೆಯೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಇದ್ದು, ವಿಶ್ವಕರ್ಮ ಸಮು ದಾಯ ಸನಾತನ ಹಿಂದೂ ಧರ್ಮದ ಅಡಿಪಾಯವಾಗಿದೆ ಎಂದು ಹೈಕೋರ್ಟ್ ವಕೀಲ ಹರೀಶ್ ಪೂಂಜ ಅಭಿಪ್ರಾಯ ಪಟ್ಟರು.
ವೇಣೂರು ವಿಶ್ವಕರ್ಮ ಸೇವಾ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಖಂಡಿ ಗದ ಸಂಘದ ಕಟ್ಟಡದಲ್ಲಿ ಸಾಮೂಹಿಕ ಉಪನಯನ, ವಿಶ್ವಕರ್ಮ ಪೂಜೆ ಹಾಗೂ ಮಹಾಸಭೆಯ ಪ್ರಯುಕ್ತ ಈಚೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಕಾಪಾಡಿಕೊಂಡು ಬಂದಿರುವ ವಿಶ್ವ ಕರ್ಮ ಸಮಾಜ ಸಂಸ್ಕೃತಿಯನ್ನು ಉಳಿ ಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಆಧುನಿಕ ಕಾಲಘಟ್ಟದಲ್ಲೂ ಹಿಂದೂ ಸಂಪ್ರದಾಯಗಳನ್ನು ವಿಶ್ವಕರ್ಮ ಸಮಾಜ ಆಚರಿಸಿಕೊಂಡು ಬಂದಿದೆ.
ಶಿಕ್ಷಣದ ವ್ಯವಸ್ಥೆಯಲ್ಲೂ ಸಂಸ್ಕಾರ, ಸಂಸ್ಕೃತಿ ದೊರೆಯುವಂತಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಹೊಂದಿರುವ ವಿಶ್ವಕರ್ಮ ಸಮಾಜ ಮುಂದಿನ ದಿನಗಳಲ್ಲಿ ಬಲಿಷ್ಠ ಸಮಾಜ ಆಗಲಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ ವಹಿಸಿದ್ದರು.
ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಹರೀಶ್ ಆಚಾರ್ಯ, ಮಂಗಳೂರು ಸೌತ್ ಕೆನರಾ ಗೋಲ್ಡ್ಸ್ಮಿತ್ ಕೊ–ಅಪರೇಟಿವ್ ಸೊಸೈಟಿಯ ಬಿ.ಎಂ. ರವೀಂದ್ರ ಆಚಾರ್ಯ, ವೇಣೂರಿನ ಉದ್ಯಮಿ ಭಾಸ್ಕರ ಪೈ, ಇಳಂತಿಲ ತಾಲ್ಲೂಕು ಪಂಚಾಯಿತಿ ಸದಸ್ಯ ಪುಂಡಲೀಕ ಆಚಾರ್ಯ, ವೇಣೂರು ವಿಶ್ವಕರ್ಮ ಸೇವಾ ಸಂಘದ ಗೌರವಾಧ್ಯಕ್ಷ ಶ್ರೀಧರ ಆಚಾರ್ಯ ಖಂಡಿಗ ಇದ್ದರು.
ಹೆಚ್ಚು ಅಂಕ ಪಡೆದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಕಟ್ಟಡಕ್ಕೆ ಸ್ಥಳದಾನ ನೀಡಿದ ಸಂಘಧ ಗೌರವಾಧ್ಯಕ್ಷ ಶ್ರೀಧರ ಆಚಾರ್ಯ ಖಂಡಿಗ ಹಾಗೂ ಚಿತ್ರಕಲೆಯ ಬಾಲಪ್ರತಿಭೆ ಚೇತನ್ ಪಿ. ಪೆರಿಂಜೆ ಅವರನ್ನು ಸನ್ಮಾನಿಸಲಾಯಿತು.
ಸಾಮೂಹಿಕ ಉಪನಯನದಲ್ಲಿ 17 ಮಂದಿ ವಟುಗಳು ಇದ್ದರು. ಸಂಘದ ಕಾರ್ಯದರ್ಶಿ ಹರೀಶ್ಚಂದ್ರ ಆಚಾರ್ಯ ವೇಣೂರು ವರದಿ ವಾಚಿಸಿದರು.
ಅಧ್ಯಕ್ಷ ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ಚಂದಯ್ಯ ಆಚಾರ್ಯ ವಂದಿಸಿದರು.