ಕೆರೂರ: ‘ಅಂತರ್ಜಲ ವೃದ್ಧಿಗೆ 11 ಕೆರೆಗಳನ್ನು ತುಂಬಿಸುವ ಮಹಾತ್ವಾಕಾಂಕ್ಷೆ ಯೋಜನೆ ರೈತರ ಪ್ರಗತಿಗೆ ನಾಂದಿ ಹಾಡಲಿದೆ’ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಪ್ರಶಂಸಿಸಿದರು.
ಇಲ್ಲಿಗೆ ಸಮೀಪದ ಅಗಸನಕೊಪ್ಪ ಗ್ರಾಮದ ಬಳಿ ಹೆರಕಲ್ (ದಕ್ಷಿಣ) ಏತ ನೀರಾವರಿ ಯೋಜನೆ ವಿತರಣಾ ತೊಟ್ಟಿ ಹಾಗೂ ಕಾಲುವೆಗಳ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಯೋಜನೆ ಮೂಲಕ ರಾಜ್ಯ ಸರ್ಕಾರ ರೈತ ಪರ ಸರ್ಕಾರ ಎಂದು ಸಾಬೀತುಪಡಿಸಿದೆ ಎಂದು ಎಸ್.ಆರ್.ಪಾಟೀಲ ಹೇಳಿದರು.
ಸತತ ಬರದಿಂದ ನಲುಗಿದ ಪ್ರತಿಯೊಬ್ಬ ರೈತರಿಗೂ ಈ ಸೌಲಭ್ಯ ಮುಟ್ಟಬೇಕು. ಆ ಮೂಲಕ ಅವರ ಬದುಕು ಅಭ್ಯುದಯಗೊಳ್ಳಲಿ ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ,ರೈತರು ತಮ್ಮ ಜಮೀನುಗಳಲ್ಲಿ ಬರುವ ಕಾಲುವೆ ಕಾಮಗಾರಿಗೆ ತಂಟೆ, ತಕರಾರಿಗೆ ಮುಂದಾಗದೇ ಸದ್ಭಳಕೆಗೆ ಒತ್ತು ನೀಡಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಶಶಿಕಲಾ ಯಡಹಳ್ಳಿ, ಕಗಲಗೊಂಬ, ಸೂಳಿಕೇರಿ ಇತರೆ ಕೆಲವು ಹಳ್ಳಿಗೆ ಯೋಜನೆ ಸೌಲಭ್ಯ ವಿಸ್ತರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯೋಜನೆ ರೂವಾರಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ, 11 ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆ ಸಫಲತೆ ನಿಜಕ್ಕೂ ಐತಿಹಾಸಿಕ ದಾಖಲೆಯಾಗಿದೆ ಎಂದರು. ಕೃಷಿಕರು ನೀರಿನ ದುರ್ಬಳಕೆ ಮೊದಲು ತಡೆಗಟ್ಟಬೇಕು ಎಂದು ಜೆ.ಟಿ.ಪಾಟೀಲ ಕೃಷಿಕರಿಗೆ ಸಲಹೆ ಮಾಡಿದರು.
ಪ್ರಮುಖರಾದ ಬಸವಪ್ರಭು ಸರನಾಡಗೌಡ್ರ, ಎನ್.ಬಿ. ಬನ್ನೂರ, ಡಾ.ಎಂ.ಜಿ.ಕಿತ್ತಲಿ, ಕೆಬಿಜೆಎನ್ಎಲ್ ಎಂಜಿನಿಯರ ಎನ್.ಜಯಣ್ಣ ಮಾತನಾಡಿದರು. ಸಮಾರಂಭದಲ್ಲಿ ಎಸ್.ಆರ್. ಮೆಳ್ಳಿ, ಸವಿತಾ ನಾರಪ್ಪನವರ, ರಮೇಶ ಯಡಹಳ್ಳಿ, ಹನಮಂತ ನಾಗನೂರ, ಎಚ್.ವೈ.ಮುಗಳೊಳ್ಳಿ, ಕಾರ್ಯಪಾಲ ಎಂಜನಿಯರ್ ಎಂ.ಎಸ್. ಇನಾಂದಾರ, ಎಂ.ಕೆ.ಯತ್ನಟ್ಟಿ, ಸುಭಾಸ ಪೂಜಾರ, ಹನಮಂತ ಗೋಡಿ, ಕಮಲರಾಜ್, ಬಂದಕೇರಿ, ರತ್ನಪ್ಪ ರಾಠೋಡ, ಡಾ.ಬಸನಗೌಡ ಕೋವಳ್ಳಿ, ಆರ್.ಡಿ. ದಳವಾಯಿ, ಸಂಜೀವ ಚಿಮ್ಮನಕಟ್ಟಿ, ಈರನಗೌಡ ಕರಿಗೌಡ್ರ, ಧರ್ಮಣ್ಣ ಭಗವತಿ, ಅನಿಲ್ ದಡ್ಡಿ ಹಾಜರಿದ್ದರು.