ಜಮಖಂಡಿ:‘ಮಹಿಳೆಯರು ಶತ ಶತಮಾನಗಳಿಂದ ಒಳ್ಳೆಯ ಮಕ್ಕಳನ್ನು ದೇಶಕ್ಕೆ ಕೊಡುತ್ತ ಬಂದಿದ್ದಾರೆ. ದೇಶವನ್ನು ಕಟ್ಟುವ ಸಾಕಷ್ಟು ಶ್ರೇಷ್ಠ ವ್ಯಕ್ತಿಗಳನ್ನು ಕೊಡುವ ಶಕ್ತಿ ಮಹಿಳೆಯರಿಗೆ ಇದೆ’ ಎಂದು ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಶ್ರೀಗಳು ಹೇಳಿದರು.
ತಾಲ್ಲೂಕಿನ ಮರೇಗುದ್ದಿ ಗ್ರಾಮದ ಶ್ರೀದಿಗಂಬರೇಶ್ವರ ಸಂಸ್ಥಾನ ಮಠದ ತೋಂಟದಾರ್ಯ ದೇವರು ಶ್ರೀಗಳ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಗುರುವಾರ ನಡೆದ ಮಹಿಳಾ ಸಮಾವೇಶ ಹಾಗೂ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
‘ಮಠಮಾನ್ಯಗಳು ಜನರಿಗೆ ಸಂಸ್ಕಾರ ಕೊಡುವ ಕಾರ್ಯ ನಿರಂತರವಾಗಿ ನಡೆಯಬೇಕು. ಅಂದಾಗ ಮಾತ್ರ ಸಂಸ್ಕೃತಿ, ಪರಂಪರೆ ಉಳಿದು ಬೆಳೆಯಲು ಸಾಧ್ಯವಾಗುತ್ತದೆ’ ಎಂದರು.
ಮಮದಾಪುರ ವಿರಕ್ತ ಮಠದ ಅಭಿನವ ಮುರಘೇಂದ್ರ ಶ್ರೀಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಎಷ್ಟೇ ಜನ್ಮ ಹೊತ್ತು ಬಂದರೂ ತಾಯಿಯ ಋಣವನ್ನು ತೀರಿಸಲಾಗದು. ಈ ದೇಶದ ಸಂಸ್ಕೃತಿ ಉಳಿದಿರುವುದು ಮಹಿಳೆಯರಿಂದ ಮಾತ್ರ’ ಎಂದರು.
ಅನಗವಾಡಿಯ ಮಾತೋಶ್ರೀ ಅನಸೂಯಾತಾಯಿ ಮಾತನಾಡಿ,‘ಸಹನಾಮೂರ್ತಿ. ಸಹನ ಸ್ವಭಾವ, ತಾಳ್ಮೆ ಗುಣ ಮಹಿಳೆಗೆ ಇದೆ. ಸಾಧನೆಗಳ ತವರು ಮನೆ ಮಹಿಳೆ. ಮಹಿಳೆ ಜಗತ್ತನ್ನೇ ಸಂರಕ್ಷಿಸಬಲ್ಲಳು’ ಎಂದರು.
ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಗೋಕಾಕ ಜ್ಞಾನ ಮಂದಿರದ ಸುವರ್ಣಾತಾಯಿ ಪೂಜಾರಿ, ಸಿದ್ದಾಪುರದ ಮಾತೋಶ್ರೀ ನೀಲಮ್ಮತಾಯಿ ಆಶೀರ್ವಚನ ನೀಡಿದರು.
ಕಮಲಾ ನಿರಾಣಿ, ಮಹಿಳಾ ಸಾಂತ್ವನ ಕೇಂದ್ರದ ಸಂಚಾಲಕಿ ರೇಖಾ ಕಾಂತಿ ಮಾತನಾಡಿದರು. ಬಿದರಿ ಕಲ್ಮಠದ ಶಿವಲಿಂಗ ಶ್ರೀಗಳು, ಮರೇಗುದ್ದಿ ಅಡವಿ ಸಿದ್ಧೇಶ್ವರ ಮಠದ ಗುರುಪಾದ ಶ್ರೀಗಳು, ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತ ಮಠದ ಕುಮಾರ ವಿರೂಪಾಕ್ಷ ಶ್ರೀಗಳು, ತೋಂಟದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.