ಕೆಜಿಎಫ್: ‘ಜನಸಾಮಾನ್ಯರ ಪರವಾಗಿರುವ ಸರ್ಕಾರವನ್ನು ರಾಜ್ಯದಲ್ಲಿ ತರಲು ಜೆಡಿಎಸ್ ಪಕ್ಷವನ್ನು ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು’ ಎಂದು ಮಾಜಿ ಶಾಸಕ ಎಂ.ಭಕ್ತವತ್ಸಲಂ ಹೇಳಿದರು.
ಚಾಂಪಿಯನ್ರೀಫ್ಸ್ನ ಉದ್ದಂಡಮ್ಮ ದೇವಾಲಯದಲ್ಲಿ ಶುಕ್ರವಾರ ಮುಂಬರುವ ಚುನಾವಣೆಗಾಗಿ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಜೆಡಿಎಸ್ ನೇತೃತ್ವದ ಸರ್ಕಾರ ಬರಬೇಕು. ಇದಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ಕಡ್ಡಾಯವಾಗಿ ಹತ್ತು ಮಂದಿಗೆ ಪಕ್ಷದ ಸಾಧನೆ ತಿಳಿಸಿ, ಅವರು ಪಕ್ಷಕ್ಕೆ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು’ ಎಂದರು.
‘ನಗರದಲ್ಲಿ ಜೆಡಿಎಸ್ ಒಲವು ಇರುವ 2500 ಸಕ್ರಿಯ ಕಾರ್ಯಕರ್ತರನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಒಬ್ಬ ಸಕ್ರಿಯ ಕಾರ್ಯಕರ್ತ ಕನಿಷ್ಠ ಹತ್ತು ಮತಗಳನ್ನು ಗಳಿಸಿಕೊಟ್ಟರೆ ಕೆಜಿಎಫ್ ನಗರದಲ್ಲಿಯೇ 25000 ಮತಗಳನ್ನು ಜೆಡಿಎಸ್ ಪಡೆಯಬಹುದು. ನಂತರ ಗ್ರಾಮೀಣ ಪ್ರದೇಶದಲ್ಲಿಯೂ ಇದೇ ಮಾದರಿಯ ಸಂಘಟನೆಯನ್ನು ಮಾಡಲಾಗುವುದು’ ಎಂದರು.
ನಗರಸಭೆಯ ಮಾಜಿ ಅಧ್ಯಕ್ಷ ದಯಾನಂದ, ಸದಸ್ಯರಾದ ಕುಮಾರ್, ದಾವಿದ್, ನಿಜಾಂ ಪಾಷಾ, ಕುಲಶೇಖರ್, ಚಿತ್ರಭಕ್ತವತ್ಸಲಂ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗೋಪಾಲ್ ಹಾಜರಿದ್ದರು.