ಕೋಲಾರ: ‘ಸಂವಿಧಾನದ ಹಕ್ಕುಗಳ ಬಗ್ಗೆ ಸಾರ್ವಜನಿರಿಗೆ ಅರಿವು ಮೂಡಿಸಿದಾಗ ಅಲ್ಪಸಂಖ್ಯಾತರು ಶೋಷಣೆಯಿಂದ ಮುಕ್ತವಾಗಲು ಸಾಧ್ಯವಾಗುತ್ತದೆ’ ಎಂದು ಕಾರ್ಮಿಕ ಇಲಾಖೆಯ ಸಂಯೋಜಕ ಲಕ್ಷ್ಮೀನಾರಾಯಣ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಅಸ್ಪೃಶ್ಯ ದೌರ್ಜನ್ಯ ನಿಯಂತ್ರಣ ವಿಚಾರ ಕಮ್ಮಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಹಕ್ಕುಗಳ ಬಗ್ಗೆ ಗ್ರಾಮೀಣ ಭಾಗದ ಜನಕ್ಕೆ ಅರಿವು ಇಲ್ಲದ ಕಾರಣ ದೌರ್ಜನ್ಯ, ಶೋಷಣೆ ಪ್ರಕರಣಗಳು ನಡೆಯುತ್ತಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರಕರಣಗಳನ್ನು ನಿಯಂತ್ರಿಸಲು ಸಂಘಸಂಸ್ಥೆಗಳವರು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ಟಿ.ವಿಜಯಕುಮಾರ್ ಮಾತನಾಡಿ, ‘ಸಮಾಜದಲ್ಲಿ ಇಂದಿಗೂ ಜಾತಿಪದ್ದತಿ ಜೀವಂತವಾಗಿರುವುದು ವಿಷಾದಕರ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.
‘ಎಪ್ಪತ್ತರ ದಶಕದಲ್ಲಿದ್ದ ಅಸ್ಪೃಶ್ಯತೆ, ದೌರ್ಜನ್ಯ ದಬ್ಬಾಳಿಕೆಗಳು ಈಗ ಬಹುತೇಕ ಕಡಿಮೆಯಾಗಿವೆ. ಇದಕ್ಕೆಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಜಾರಿಗೆ ತಂದ ಅಸ್ಪೃಶ್ಯ ದೌರ್ಜನ್ಯ ನಿಯಂತ್ರಣ ಕಾಯ್ದೆಯೇ ಕಾರಣವಾಗಿದೆ’ ಎಂದರು.
‘ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಸ್ಥಾಪನೆಯಾಗಿರುವ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.
ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಸದಸ್ಯ ಮಂಜು, ಈ ನೆಲ ಈಜಲ ಮತ್ತು ಸಾಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಬಿ.ವೆಂಕಟಾಚಲಪತಿ, ಶಾಂತಿಸೌಹಾರ್ದ ಮತ್ತು ಕ್ರೀಡಾ ಸಾಂಸ್ಕೃತಿ ತಂಡದ ಕಲಾವಿಧೆ ಎಚ್.ಶಾಂತಮ್ಮ, ಕವಿ ಡಿ.ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.