ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಕೌಶಲ ತರಬೇತಿ ಕೇಂದ್ರ

Last Updated 14 ಮೇ 2017, 6:15 IST
ಅಕ್ಷರ ಗಾತ್ರ

ಉಡುಪಿ: ಪದವಿ ಶಿಕ್ಷಣವನ್ನು ಪೂರೈಸಿ ರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಕೌಶಲಮಟ್ಟವನ್ನು ಪರಿಶೀಲಿಸಿ ಅವರಿಗೆ ನೇರವಾಗಿ ಉದ್ಯೋಗಾವಕಾಶ ಗಳನ್ನು ಕಲ್ಪಿಸಿಕೊಡುವ ಸಲುವಾಗಿ ಈಗಾಗಲೇ ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ವೊಂದನ್ನು ಸ್ಥಾಪಿಸಲಾಗಿದೆ.

ಅದೇ ಮಾದರಿಯ ಕೌಶಲ ತರಬೇತಿ ಕೇಂದ್ರವೊಂದನ್ನು ಉಡುಪಿಯಲ್ಲಿ ಸಹ ಶೀಘ್ರದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಮೀನುಗಾರಿಕೆ, ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಎಂಜಿಎಂ ಕಾಲೇಜು, ಮಣಿಪಾಲ ವಿಶ್ವವಿದ್ಯಾಲಯ ಹಾಗೂ ರೋಟರಿ ಕ್ಲಬ್‌ ಮಣಿಪಾಲ ಟೌನ್‌ನ ಸಂಯುಕ್ತ ಆಶ್ರಯ ದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮಾರ್ಗದರ್ಶನ ಹಾಗೂ ಸಿಇಟಿ ನೇಮಕಾತಿ ಪ್ರಕ್ರಿಯೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಕ್ಕಳು ಏನಾಗಬೇಕೆಂಬುವುದನ್ನು ಹೆತ್ತವರು ತೀರ್ಮಾನ ಮಾಡುವುದು ಅಷ್ಟು ಸರಿಯಲ್ಲ. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಆ ಕ್ಷೇತ್ರ ದಲ್ಲಿ ತಮ್ಮ ಮಕ್ಕಳನ್ನು ಮುನ್ನಡೆಸಿ ಕೊಂಡು ಹೋಗುವ ಜವಾಬ್ದಾರಿ ಹೆತ್ತವರದು ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕು.  ಎಲ್ಲರೂ ಎಂಜಿನಿಯರ್‌, ಡಾಕ್ಟರ್‌ ಆಗಬೇಕೆಂದು ಬಯಸುವುದು ಹಾಗೂ ಎಲ್ಲರೂ ಒಂದೇ ಕ್ಷೇತ್ರವನ್ನು ಆಯ್ಕೆ ಮಾಡುವುದು ಸರಿಯಲ್ಲ. ಹೆಚ್ಚಿನವರು ಎಂಜಿನಿಯರ್‌ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿದ್ದ ಪರಿಣಾಮ ಇಂದು ಕೆಲವೊಂದು ಕಡೆಗಳಲ್ಲಿ ಎಂಜಿನಿಯರ್‌ ಕಾಲೇಜುಗಳು ಮುಚ್ಚುವ ಹಂತದಲ್ಲಿದೆ. ಎಂಜಿನಿಯರಿಂಗ್‌ ಪದವೀಧರರು ಏಳೆಂಟು ಸಾವಿರಕ್ಕೆ ದುಡಿಯುವ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದರು.

ನಾವು ಇಂದು ಮಾಹಿತಿ ತಂತ್ರಜ್ಞಾನ ದ ಯುಗದಲ್ಲಿದ್ದೇವೆ. ಹಿಂದಿನ ಕಾಲಕ್ಕೂ ಇಂದಿಗೂ ತುಂಬಾ ವ್ಯತ್ಯಾಸವಿದೆ. ಈಗಿನ ಕಾಲದ ಮಕ್ಕಳಿಗೆ ಇರುವಂತಹ ಮಾಹಿತಿ ಆಗಿನ ಕಾಲದ ವಿದ್ಯಾರ್ಥಿಗಳಿಗೆ ಇರಲಿಲ್ಲ.

ಪ್ರಪಂಚದಲ್ಲಿಯೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊಂದಿದೆ. ಆದ್ದರಿಂದ ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಉದ್ಯೋಗದ ಬಗ್ಗೆ ಮಾರ್ಗದರ್ಶನ ಹಾಗೂ ಮಾಹಿತಿ ನೀಡುವ ಕೆಲಸ ಆಗಬೇಕು. ವಿದ್ಯಾರ್ಥಿ ಗಳಿಗೆ ಯಾವುದೆಲ್ಲ ಉದ್ಯೋಗ ಕ್ಷೇತ್ರ ಗಳನ್ನು ಆಯ್ದುಕೊಳ್ಳಬಹುದು ಎನ್ನುವು ದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಕಾರ್ಯ ಆಗಬೇಕಾಗಿದೆ ಎಂದರು.

ಕಾರ್ಪೊರೇಷನ್‌ ಬ್ಯಾಂಕ್‌ನ ಮಹಾಪ್ರಬಂಧಕ ರಾಜೇಂದ್ರ ಪ್ರಸಾದ್‌, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉಡುಪಿ ನೋಡಲ್‌ ಅಧಿಕಾರಿ ಸಚಿತ್‌ ಸುವರ್ಣ, ಲೆಕ್ಕಪರಿಶೋಧಕ ಅನಂತ ನಾರಾಯಣ ಪೈ, ಮಣಿಪಾಲ ವಿ.ವಿ.ಯ ಡಾ.ಭವಾನಿ ರಾವ್‌, ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ನಾಗರಾಜ್‌ ಕಾಮತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್‌ ಸ್ವಾಗತಿಸಿದರು. ಪತ್ರಿಕೋದ್ಯಮ ಉಪನ್ಯಾಸಕ ಸುಚೀತ್‌ ಕೋಟ್ಯಾನ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT