ಶಿಗ್ಗಾವಿ: ‘ಗ್ರಾಮೀಣ ಪ್ರದೇಶ ಅಭಿವೃದ್ಧಿ ಕಂಡಾಗ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಗ್ರಾಮೀಣ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಅದರ ಪ್ರಯೋಜ ಅಲ್ಲಿನ ಜನರು ಪಡೆಯಬೇಕು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ತಡಸ, ಕುನ್ನೂರ, ಗೊಟಗೋಡಿ ಸೇರಿದಂತೆ ಕೆಲವು ಗ್ರಾಮದಲ್ಲಿ ಶನಿವಾರ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಪ್ರತಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬಾಂದಾರಗಳಿಗೆ ತಲಾ ₹20 ಲಕ್ಷ ವಿನಿಯೋಗಿಸಲಾಗುವುದು. ರೈತರ ಬಹು ದಿನದ ಬೇಡಿಕೆಯಾಗಿದ್ದ ಬೆಣ್ಣೆಹಳ್ಳದ ಅಭಿವೃದ್ಧಿಗೆ ಯೋಜನಾ ರೂಪಿಸಲಾಗಿದ್ದು, ಶೀಘ್ರದಲ್ಲಿ ₹5 ಕೋಟಿ ವೆಚ್ಚದಲ್ಲಿ ಎರಡು ಸೇತುವೆ ಹಾಗೂ ಬಾಂದಾರ ನಿರ್ಮಾಣದ ಜತೆಗೆ ಗ್ರಾಮದ ಚರಂಡಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.
‘ಕೆರೆ,ಹೊಂಡಗಳು ಈ ಭಾಗದ ರೈತ ಸಮೂಹದ ಜೀವನಾಡಿಯಾಗಿದ್ದು, ಮಳೆಯಾಶ್ರಿತ ರೈತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆರೆ ಹೊಂಡಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಉದ್ದೇಶವಿದೆ’ ಎಂದರು.
ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರತ್ನಾಕರ ರೇವಣಕರ, ಸದಸ್ಯರಾದ ಕರೀಂಸಾಬ್ ಹುಬ್ಬಳ್ಳಿ, ಆನಂದ ಬಾಳಕ್ಕ ನವರ, ಬಸವಂತಪ್ಪ ತಿಮ್ಮಾ ಪುರ, ಡಾ.ಎಸ್.ಸಿ. ಜಕ್ಕನವರ, ಅಜೀತ ಸಂಕಪ್ಪನವರ, ಶಿವಾಜಿ ಲಮಾಣಿ, ಕೃಷ್ಣ ಚವಡಾಳ ಉಪಸ್ಥಿತರಿದ್ದರು.