ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ, ನಾಯಕರ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಯತ್ನ

Last Updated 14 ಮೇ 2017, 10:37 IST
ಅಕ್ಷರ ಗಾತ್ರ

ಹೊಸಪೇಟೆ: ‘ನನ್ನ ಹೆಸರಿನ ನಕಲಿ ಲೆಟರ್ ಹೆಡ್, ಸಹಿ ಬಳಸಿಕೊಂಡು ಬಳ್ಳಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಬ್ಯಾಡ (ನಾಯಕ) ಸಮುದಾಯ ಹಾಗೂ ನನ್ನ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡುವ ದೊಡ್ಡ ಪಿತೂರಿ ನಡೆದಿದೆ. ಇದರಲ್ಲಿ ಕಾಂಗ್ರೆಸ್‌ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಅವರ ಆಪ್ತ ಡಿ. ವೆಂಕಟರಮಣ ಅವರ ಕೈವಾಡವಿರುವ ಸಾಧ್ಯತೆ ಇದೆ’ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್‌ ಆರೋಪ ಮಾಡಿದರು.

‘ಪತ್ರವು ವೆಂಕಟರಮಣ ಅವರ ವಾಟ್ಸ್‌ಆ್ಯಪ್‌ನಿಂದ ಸುಮಾರು ಹದಿನೈದು ಗ್ರೂಪ್‌ಗಳಿಗೆ ಮತ್ತು ವೈಯಕ್ತಿಕವಾಗಿ ಅನೇಕ ಜನರಿಗೆ ಹೋಗಿವೆ. ವೆಂಕಟರಮಣ ಅವರಿಂದ ಬೇರೆಯವರಿಗೆ ಕಳುಹಿಸಿರುವ ಸಂದೇಶದ ಸ್ಕ್ರೀನ್‌ ಶಾಟ್‌ ತೆಗೆದು ಶನಿವಾರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ನಾನು ಯಾರಿಗೇ ಪತ್ರ ಬರೆದರೂ ಕ್ರಮ ಸಂಖ್ಯೆ ಹಾಕಿಯೇ ಬರೆಯುತ್ತೇನೆ. ಆದರೆ, ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಕ್ರಮ ಸಂಖ್ಯೆ ನಮೂದಿಸಿಲ್ಲ. ನಾನು ಈ ಹಿಂದೆ ಬರೆದ ಪತ್ರದಲ್ಲಿರುವ ಸಹಿಯನ್ನು ಕಂಪ್ಯೂಟರ್‌ನಲ್ಲಿ ಸ್ಕ್ಯಾನ್‌ ಮಾಡಿ ಬಳಸಿಕೊಂಡಿರುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಏ. 9ರಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಏ. 22ರಂದು ನಗರಸಭೆ ಸದಸ್ಯ ಜಿ. ಮಲ್ಲಿಕಾರ್ಜುನ ಎಂಬುವವರು ನನ್ನ ಗಮನಕ್ಕೆ ತಂದಿದ್ದಾರೆ. ಅದೇ ದಿನ ಅದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಲಿಂಗನಗೌಡ ನೆಗಳೂರು ಅವರಿಗೂ ತಿಳಿಸಿದ್ದೇನೆ. ಈ ಕುರಿತು ಸೈಬರ್‌ ಅಪರಾಧ ಪತ್ತೆ ದಳದಿಂದ ಸಮಗ್ರ ತನಿಖೆ ನಡೆಸಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ್ದೇನೆ’ ಎಂದು ತಿಳಿಸಿದರು.

‘ನನ್ನ ಕ್ಷೇತ್ರದಲ್ಲಿ ನಾಯಕ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಅವರು ನನ್ನನ್ನು ಬೆಂಬಲಿಸಿದ್ದಾರೆ. ಸತತವಾಗಿ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅವರ ವಿರುದ್ಧ ನನ್ನನ್ನು ಎತ್ತಿ ಕಟ್ಟಿದರೆ ಮುಂದಿನ ಚುನಾವಣೆಯಲ್ಲಿ ಸುಲಭವಾಗಿ ಸೋಲಿಸಬಹುದು ಅಂದುಕೊಂಡು ವಿರೋಧಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ನಾಯಕರು ಸೇರಿದಂತೆ ಎಲ್ಲ ಸಮುದಾಯದವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಆದರೆ, ರಾಜಕೀಯ ಕಾರಣಕ್ಕಾಗಿ ಕೆಲವರು ನನ್ನ ಘನತೆಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಕ್ಷೇತ್ರದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದಾರೆ’ ಎಂದರು.

‘ಬೇರೆ ಕಡೆ ದ್ವೇಷದ ರಾಜಕಾರಣ ನಡೆಯುತ್ತದೆ. ಆದರೆ, ನಮ್ಮ ಕ್ಷೇತ್ರದಲ್ಲಿ ಅದು ಇರಲಿಲ್ಲ. ಈಗ ಈ ಬೆಳವಣಿಗೆ ನಡೆದಿರುವುದು ನೋವು ತಂದಿದೆ’ ಎಂದು ಹೇಳಿದರು. ‘ವಿಷಯ ನನ್ನ ಗಮನಕ್ಕೆ ಬಂದ ದಿನವೇ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದ್ದೆ. ಸತ್ಯ ಹೊರಗೆ ಬರಬಹುದು ಎನ್ನುವ ಕಾರಣಕ್ಕಾಗಿ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಹಲವು ದಿನಗಳು ಕಳೆದಿರುವುದರಿಂದ ಈ ಪ್ರತಿಕ್ರಿಯಿಸುತ್ತಿದ್ದೇನೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪತ್ರದಲ್ಲಿ ಏನಿದೆ?
ಆನಂದ ಸಿಂಗ್‌ ಅವರ ಲೆಟರ್‌ ಹೆಡ್‌ ಹಾಗೂ ಸಹಿ ಹೊಂದಿರುವ ಪತ್ರವನ್ನು ಏ. 9ರಂದು ಬಳ್ಳಾರಿ ಜಿಲ್ಲಾಧಿಕಾರಿಗೆ ಬರೆಯಲಾಗಿದೆ. ನಗರಸಭೆಯಲ್ಲಿ ನಡೆದ ಅವ್ಯವಹಾರವನ್ನು ಬಯಲಿಗೆಳೆದಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ.

ನಗರಸಭೆ ಸದಸ್ಯರಾದ ವೇಣುಗೋಪಾಲ, ಮಲ್ಲಪ್ಪ, ಗಿಂಜಿ ಮಂಜು, ನಿಂಗಪ್ಪ ಹಾಗೂ ಕಣ್ಣಿ ಉಮಾದೇವಿ ಶ್ರೀಕಂಠ ಇವರು ಸಕ್ರಿಯವಾಗಿ ಅವ್ಯವಹಾರದಲ್ಲಿ ತೊಡಗಿದ್ದಾರೆ. ಇವರ ದುರ್ನಡತೆಯಿಂದ ನಗರಸಭೆಗೆ ಕೆಟ್ಟ ಹೆಸರು ಬಂದಿದೆ.

ಈ ಪ್ರಕರಣದಲ್ಲಿ ಬ್ಯಾಡರು ಆಯ್ಕೆಯಾಗಿ ಕಚೇರಿಯ ವಾತಾವರಣ ಹಾಳು ಮಾಡುತ್ತಿದ್ದಾರೆ. ಇವರೆಲ್ಲರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು ಎನ್ನುವುದು ಪತ್ರದಲ್ಲಿನ ಸಾರಾಂಶ.

ಗುಜ್ಜಲ ಗಂಗಾಧರ ಎಂಬುವವರಿಂದ ನನಗೆ ಪತ್ರ ಬಂದಿತ್ತು. ಅದನ್ನು ನಾನು ಬೇರೆಯವರಿಗೆ ಕಳುಹಿಸಿದ್ದೇನೆ. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ
ಡಿ. ವೆಂಕಟರಮಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT