ಮಹಾಜನ್ ಆಯೋಗದಿಂದ ಕಾಸರಗೋಡಿನಲ್ಲಿ ಸಾಕ್ಷ್ಯ ಸಂಗ್ರಹ
ಮಂಗಳೂರು, ಮೇ 14– ಕೇರಳ–ಮೈಸೂರು ಗಡಿ ವಿವಾದ ಪರಿಶೀಲಿಸುವ ಮಹಾಜನ್ ಏಕ ಸದಸ್ಯ ಆಯೋಗವು ಕಾಸರಗೋಡಿಗೆ ಹೋಗುವ ಮಾರ್ಗದಲ್ಲಿ ಸಂಜೆ ವಿಮಾನದಲ್ಲಿ ಇಲ್ಲಿಗೆ ಆಗಮಿಸಿತು.
ಸೋಮವಾರ ಬೆಳಿಗ್ಗೆ ಕಾಸರಗೋಡಿಗೆ ಪ್ರಯಾಣ ಮಾಡುವ ಶ್ರೀ ಮಹಾಜನ್ ಅವರು ಅದೇ ದಿನ ಕಾಸರಗೋಡು ತಾಲ್ಲೂಕು ಕಚೇರಿಯಲ್ಲಿ ಸಾಕ್ಷ್ಯ ಸಂಗ್ರಹ ಆರಂಭಿಸುತ್ತಾರೆ ಮತ್ತು ಸಂಜೆ ಮಂಗಳೂರಿಗೆ ವಾಪಸಾಗುತ್ತಾರೆ.
ಮಹಾರಾಷ್ಟ್ರ ಪರ ಸಾಕ್ಷ್ಯ ನೀಡಲು ಜನರಿಗೆ ಪೋಲೀಸರ ಒತ್ತಾಯ
ನಿಪ್ಪಾಣಿ, ಮೇ 14– ಮಹಾಜನ್ ಆಯೋಗದ ಮುಂದೆ ತನ್ನ ಪರವಾಗಿ ಸಾಕ್ಷ್ಯ ನೀಡುವಂತೆ ಮಹಾರಾಷ್ಟ್ರ ರಾಜ್ಯದಲ್ಲಿರುವ ಗಡಿಹಿಂಗ್ಲಜ್ ತಾಲ್ಲೂಕಿನ ಜನರನ್ನು ಬಲವಂತಪಡಿಸಲು ಮಹಾರಾಷ್ಟ್ರ ಸರಕಾರವು ಪೋಲೀಸರನ್ನು ಉಪಯೋಗಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಆ ತಾಲ್ಲೂಕಿನಲ್ಲಿ ಪ್ರವಾಸ ಮಾಡಿದ ‘ಪ್ರಜಾವಾಣಿ’ ಪ್ರತಿನಿಧಿಗೆ ಗೊತ್ತಾಗಿದೆ.
ಕೊಲ್ಲಾಪುರ ಜಿಲ್ಲೆಯಿಂದ ಡಿ.ಎಸ್.ಪಿ. ಮತ್ತು ಇತರ ಅಧಿಕಾರಿಗಳು ಆ ತಾಲ್ಲೂಕಿನ ಗ್ರಾಮಗಳಿಗೆ ಭೇಟಿಯಿತ್ತು, ಯಥಾಸ್ಥಿತಿಗೆ ಬೆಂಬಲವಾಗಿ ನಿರ್ಣಯಗಳನ್ನು ಮಾಡಲು ಜನರನ್ನು ಬಲವಂತಪಡಿಸುತ್ತಿದ್ದಾರೆ. ಅಧಿಕಾರಿಗಳನ್ನು ಯಥೇಚ್ಛವಾಗಿ ಈ ಸಂಬಂಧದಲ್ಲಿ ಬಳಿಸಿಕೊಳ್ಳಲಾಗುತ್ತಿದೆ. ಮಹಾಜನ್ ಆಯೋಗವು ಮೇ 17 ರಂದು ಕೊಲ್ಲಾಪುರಕ್ಕೆ ಭೇಟಿ ನೀಡಲಿದೆ.
ರೂಪಾಯಿಗೆ ಪಡಿ ಅಕ್ಕಿ: ಮದ್ರಾಸ್ ಯೋಜನೆ ಜಾರಿ
ಕೊಯಮತ್ತೂರು, ಮೇ 14– ರೂಪಾಯಿಗೆ ಒಂದು ಮದ್ರಾಸ್ ಪಡಿ ಅಕ್ಕಿಯನ್ನು ಮಾರುವ ತಮ್ಮ ಸರಕಾರದ ನಿರ್ಣಯವನ್ನು ನಾಳೆಯಿಂದ ಕಾರ್ಯಾಚರಣೆಗೆ ತರಲಾಗುವುದೆಂದೂ ಇದಕ್ಕಾಗಿ ಕೇಂದ್ರದಿಂದ ಧನಸಹಾಯ ಕೇಳಲಾಗುವುದೆಂದೂ ಮದ್ರಾಸ್ ಆಹಾರ ಸಚಿವರು ಇಂದು ತಿಳಿಸಿದರು.