ಮಾಯಕೊಂಡ: ಕಡಿಮೆ ಮಳೆ ಮತ್ತು ಅಲ್ಪ ಖರ್ಚಿನಲ್ಲಿ ಬೆಳೆ ಬೆಳೆದು ರೈತರು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಕೃಷಿ ಅಧಿಕಾರಿ ಶ್ರೀಧರ್ ಹೇಳಿದರು.
ಸಮೀಪದ ಶಂಕರನಹಳ್ಳಿಯಲ್ಲಿ ಪರಂಪರಾನುಗತ ಕೃಷಿ ವಿಕಾಸ ಯೋಜನೆಯಡಿ ಕೃಷಿ ಇಲಾಖೆ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಸಿರಿಧಾನ್ಯ ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿಯೇ ಉತ್ತಮ ಆದಾಯ ಪಡೆಯಬಹುದು. ಈಚೆಗೆ ಮಾರುಕಟ್ಟೆಯಲ್ಲಿ ಸಿರಿಧಾನ್ಯಕ್ಕೆ ಉತ್ತಮ ಧಾರಣೆಯಿದೆ. ಸಾವಯವ ಗೊಬ್ಬರ ಮತ್ತು ತಾವೇ ತಯಾರಿಸಿದ ಕೀಟನಾಶಕವನ್ನು ರೈತರು ಬಳಸುವುದು ಪರಿಸರಸ್ನೇಹಿ ವಿಧಾನ. ಇಲಾಖೆಯ ವಿವಿಧ ಯೋಜನೆ ಮತ್ತು ತಾಂತ್ರಿಕ ಮಾಹಿತಿ ಬಳಸಿ ಅಧಿಕ ಇಳುವರಿ ಪಡೆಯಬೇಕು ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಪರಮಶಿವಪ್ಪ ಮಾತನಾಡಿ, ‘ರೈತರು ಕೃಷಿಹೊಂಡ ನಿರ್ಮಿಸಿ ನೀರು ಸಂಗ್ರಹಣೆಗೆ ಮಾಡಬೇಕು. ಇದರಿಂದ ಅಂತರ್ಜಲ ಹೆಚ್ಚುವುದಲ್ಲದೆ ಸಂಕಷ್ಟದ ಸ್ಥಿತಿಯಲ್ಲೂ ಬೆಳೆ ಉಳಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ರವಿಕುಮಾರ್ ಮಾತನಾಡಿ, ಸರ್ಕಾರದ ಸಹಾಯಧನದಡಿ ಎರೆಹುಳು ತೊಟ್ಟಿಗಳನ್ನು ನಿರ್ಮಿಸಿ, ಉತ್ಕೃಷ್ಟ ಸಾವಯವ ಗೊಬ್ಬರ ಉತ್ಪಾದನೆಗೆ ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.
ನವಣೆ, ಆರಕ, ಬರಗು, ಸಾಮೆ, ಸಜ್ಜೆ ಬೆಳೆಯುವ ವಿಧಾನ ಕುರಿತು ತರಬೇತಿ ನೀಡಲಾಯಿತು.‘ಆತ್ಮ ಯೋಜನೆ’ಯ ತಾಂತ್ರಿಕ ವ್ಯವಸ್ಥಾಪಕ ರಮೇಶ್, ಅನುವುಗಾರರಾದ ಬಾಡಾ ನಾಗಣ್ಣ, ಕಬ್ಬೂರು ಪ್ರಕಾಶ್, ಆಂಜನೇಯ ಪರಂಪರಾಗತ ಕೃಷಿಕರ ಬಳಗದ ಸದಸ್ಯರು ಇದ್ದರು.