ಶಿವಮೊಗ್ಗ: ಸಿನಿಮಾ ಪರಿಣಾಮಕಾರಿ ಮಾಧ್ಯಮ, ಇದರಿಂದ ಸಾಮಾಜಿಕ ಬದಲಾವಣೆ ಮಾಡುವ ಪ್ರಯತ್ನ ಮಾಡಬೇಕು ಎಂದು ಕವಯತ್ರಿ ಸವಿತಾ ನಾಗಭೂಷಣ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಬಾನ್ಬಯಲು, ನಮ್ ಟೀಮ್ ಹಾಗೂ ಬೆಳ್ಳಿಮಂಡಲ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ‘ಅನಲ’ ಕಿರುಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದ ಮಹಿಳೆಯರು ಹಾಡುವುದು, ಪುಸ್ತಕ ಓದುವುದರಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಿದ್ದರು. ಈಗ ಚಿತ್ರರಂಗದಲ್ಲಿಯೂ ತೊಡಗಿಸಿ ಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಲಿ ಎಂದರು.
ಬೆಳ್ಳಿಮಂಡಲ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿನ ಒಳ್ಳೆಯ ಸಂದೇಶ ಸಾರುವ ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿಲ್ಲ. ಉತ್ತಮ ಸಾಮಾಜಿಕ ಕಳಕಳಿ ಇರುವ ಚಿತ್ರ ನಿರ್ಮಿಸಲು ಯುವಜನತೆ ಆಸಕ್ತಿ ತೋರಬೇಕು.ಆಗ ಸಿನಿಮಾ ಮಾಧ್ಯಮದ ಶಕ್ತಿಯ ಅರಿವಾಗುತ್ತದೆ ಎಂದು ಹೇಳಿದರು.
ಪ್ರೊ.ರಾಜೇಂದ್ರ ಚೆನ್ನಿ, ಕವಯತ್ರಿ ಅಕ್ಷತಾ ಹುಂಚದ ಕಟ್ಟೆ ಚಿತ್ರದ ಕುರಿತು ಮಾತನಾಡಿದರು. ಪತ್ರಕರ್ತ ಹೊನ್ನಾಳಿ ಚಂದ್ರು, ಕಿರುಚಿತ್ರ ನಿರ್ದೇಶಕಿ ಸಂಜ್ಯೋತಿ ಉಪಸ್ಥಿತರಿದ್ದರು.