ನಾಯಕನಹಟ್ಟಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲು ಈಗಿನಿಂದಲೇ ಬೂತ್ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಶಾಸಕ ಎಸ್.ತಿಪ್ಪೇಸ್ವಾಮಿ ಹೇಳಿದರು.
ತಳಕು ಗ್ರಾಮದ ಸಸ್ಯಕ್ಷೇತ್ರದಲ್ಲಿ ಭಾನುವಾರ ನಡೆದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಸರ್ಕಾರದ ಎಲ್ಲಾ ಯೋಜನೆಗಳು ವಿಫಲತೆ ಕಡೆಗೆ ಸಾಗುತ್ತಿವೆ. ಸರ್ಕಾರ ಜನಪರ ಕಾಳಜಿ ಮರೆತು ಸಾಧನಾ ಸಮಾವೇಶಗಳನ್ನು ನಡೆಸುತ್ತಿದೆ.
ನೀರು ಹಾಗೂ ಮೇವನ್ನು ಒದಗಿಸುವಲ್ಲಿ ವಿಫಲವಾಗಿದೆ. ಇದನ್ನು ತಿಳಿಸಲು ಮೇ 17ರಂದು ನಾಯಕನಹಟ್ಟಿ ಪಟ್ಟಣ ಹಾಗೂ 18ರಂದು ತಳಕು ಗ್ರಾಮದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ವೈ.ಟಿ.ಸ್ವಾಮಿ ಮಾತನಾಡಿ, ‘ಕ್ಷೇತ್ರದ ವ್ಯಾಪ್ತಿಯಲ್ಲಿ 266 ಬೂತ್ಗಳನ್ನು ಗುರುತಿಸಲಾಗಿದೆ. ಅದರಲ್ಲಿ ನಾಯಕನಹಟ್ಟಿ ಹೋಬಳಿಯಲ್ಲಿ 61 ಬೂತ್ಗಳು, ತಳಕು ಹೋಬಳಿಯಲ್ಲಿ 77 ಬೂತ್ಗಳಿವೆ.
ಪ್ರತಿ ಬೂತ್ನಲ್ಲೂ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಚೈತನ್ಯ ತುಂಬುವ ಕೆಲಸ ಮಾಡಲಾಗುವುದು. ಯುವಜನತೆ ಸೆಳೆಯಲು ರಾಜ್ಯಮಟ್ಟದ ಯುವ ಕಬ್ಬಡಿ ಟೂರ್ನಿ ಆಯೋಜಿಸಲಾಗುವುದು’ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಎಸ್.ಸೈಯದ್ಅನ್ವರ್, ಮುಖಂಡರಾದ ಕುಬೇರರೆಡ್ಡಿ, ಜಿ. ತಿಪ್ಪೇಸ್ವಾಮಿ, ರಾಮರೆಡ್ಡಿ, ಎಚ್.ವಿ. ಹನುಮಂತರೆಡ್ಡಿ, ಕಾಕಸೂರಯ್ಯ, ಕಾಲುವೆಹಳ್ಳಿ ಶ್ರೀನಿವಾಸ್, ಚಂದ್ರಣ್ಣ, ಪಾಲಯ್ಯ, ನಾಗರಾಜ, ಮಲ್ಲೇಶ್, ಬಿ.ಟಿ.ಪಾಲನಾಯಕ, ಪಿ.ಶಿವಣ್ಣ ಉಪಸ್ಥಿತರಿದ್ದರು.