ಔರಾದ್: ‘12ನೇ ಶತಮಾನದ ಶರಣರು ಜಾತಿಯಿಂದ ದೂರ ಉಳಿದು ಮನುಷ್ಯರೆಲ್ಲರೂ ಸಮಾನರು ಎಂದು ಬಾಳಿ ಬದುಕಿದವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲ್ಲೂಕಿನ ನಿಡೋದಾ ಗ್ರಾಮದಲ್ಲಿ ಈಚೆಗೆ ಟೋಕರಿ, ಕೋಳಿ ಸಮಾಜದ ವತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಟೋಕರಿ, ಕೋಳಿ ಸಮಾಜದವರು ಶ್ರಮಜೀವಿಗಳು. ಸಮಾಜದ ಜನರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಕಲ್ಪಿಸಲು ಬದ್ಧ’ ಎಂದರು.
‘ಶಿಕ್ಷಣ ಮನುಷ್ಯನಿಗೆ ಸಂಸ್ಕಾರ ನೀಡುತ್ತದೆ. ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಕಾರಣ ಡಾ.ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ. ಟೋಕರಿ ಸಮಾಜದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ಸಲಹೆ ನೀಡಿದರು.
ಧುರೀಣ ಬಿ.ನಾರಾಯಣ ಮಾತನಾಡಿದರು. ಟೋಕರಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ‘ಮೇ 28ರಂದು ಬೀದರ್ನಲ್ಲಿ ವಿಭಾಗ ಮಟ್ಟದ ಟೋಕರಿ ಸಮಾಜ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು.
ಶಂಕ್ರಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಸಿಂಗ್ ಹಜಾರಿ, ಸುರೇಶ ಭೋಸ್ಲೆ, ಸರಸ್ವತಿ ಜಮಾದಾರ, ಧೂಳಪ್ಪ ಸೂರಂಗೆ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವಡೆಯರ್, ಸುನಿಲ ಭಾವಿಕಟ್ಟಿ, ಧನರಾಜ ವಡೆಯರ್, ಲಕ್ಷ್ಮಣ ಗಾದಗೆ, ನಾಗನಾಥ ನಿಡೋದೆ, ಎಂ.ಎಸ್.ಮನೋಹರ, ಸುನಿಲ ಖಾಶೆಂಪುರ, ಹಣಮಂತರಾವ ಟೋಕರೆ, ಬಾಬುರಾವ, ಶಿವರಾಜ ಜಮಾದಾರ ಇದ್ದರು. ದೇವೇಂದ್ರ ನಿಟ್ಟೂರೆ ಸ್ವಾಗತಿಸಿದರು. ಸೂರ್ಯಕಾಂತ ಸಿಂಗೆ ನಿರೂಪಿಸಿದರು. ಧೂಳಪ್ಪ ನಿಟ್ಟೂರೆ ವಂದಿಸಿದರು.