ಹುಬ್ಬಳ್ಳಿ: ಮಾರ್ತಾಂಡ ದೀಕ್ಷಿತ್ ಬಡ್ಲಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಇದೇ 17 ರಿಂದ 20 ರವರೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. 17 ರಿಂದ 19ರವರೆಗೆ ವಿದ್ಯಾನಗರದ ಅಖಿಲ ಬಾರತ ಮಾಧ್ವ ಮಹಾ ಮಂಡಳದ ಶ್ರೀಸುಧನ್ವ ಸಭಾಂಗಣದಲ್ಲಿ ಮತ್ತು 19 ಮತ್ತು 20 ರಂದು ವಿದ್ಯಾನಗರದ ಮರಾಠ ಭವನದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
‘17 ರಂದು ಬೆಳಿಗ್ಗೆ 10 ಗಂಟೆಗೆ ಜನ್ಮಶತಮಾನೋತ್ಸವದ ಉದ್ಘಾಟನೆಯನ್ನು ಮುರಗೋಡು ಕೆಂಗೇರಿ ಮಠದ ಪೀಠಾಧೀಶ ಶಿವಚಿದಂಬರೇಶ್ವರ ಸ್ವಾಮೀಜಿ ನೆರವೇರಿಸುವರು. ಸೂರ್ಯನಾರಾಯಣ ಭಟ್ಲ ಹಿತ್ಲಳ್ಳಿ ಅವರಿಂದ ವಿದ್ವತ್ ಗೋಷ್ಠಿಗಳು ನಡೆಯಲಿವೆ’ ಎಂದು ಜನ್ಮಶತಮಾನೋತ್ಸವ ಸಮಿತಿ ಸಂಚಾಲಕ ನರಸಿಂಹರಾವ ಸೋಮಲಾಪುರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘19ರಂದು ಬೆಳಿಗ್ಗೆ ದೇವತಾ ಕಾರ್ಯಕ್ರಮ, ಗಾಯತ್ರಿ ಹೋಮ ಹಾಗೂ ಶಿವಪಂಚಾಯತನ ಹೋಮ ಜರುಗಲಿದೆ. ಸಂಜೆ ದಂಡಿ ಭಜನಾ ಸಮೇತ ಶೋಭಯಾತ್ರೆ ಮಾರ್ತಾಂಡ ದೀಕ್ಷಿತರ ನಿವಾಸದಿಂದ ಗಣಪತಿ ದೇವಸ್ಥಾನದ ಮಾರ್ಗವಾಗಿ ನಡೆಯಲಿದೆ’ ಎಂದು ವಿವರಿಸಿದರು.
‘20 ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ಅಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಪ್ರಹ್ಲಾದ ಜೋಶಿ ‘ಮಾರ್ತಾಂಡೋ ಜ್ಞಾನಭಾಸ್ಕರಃ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ‘ವೇದ ವಾಙ್ಮಯ ಉತ್ತೇಜಕ ಸಭಾ’ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದರು.
ಸಮಿತಿಯ ಡಾ.ಗಣಪತಿ ಭಟ್ಟ ಕತಗಾಲ, ಪ್ರೊ. ಸಿ.ಆರ್. ಜೋಷಿ, ಬಿ.ಎಸ್. ಮಾಳವಾಡ, ಮುರಳೀಧರ್, ಎಚ್.ಎಲ್. ಕುಲಕರ್ಣಿ, ಪ್ರಭಾಕರ ಚಕ್ರವರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.