ಹುಬ್ಬಳ್ಳಿ: ನಗರದಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ 45 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ರಸ್ತೆಗಳು ಜಲಾವೃತಗೊಂಡವು. ಜೋರು ಗಾಳಿಗೆ ಮೂರು ಮರಗಳು ಧರೆಗುರುಳಿವೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ.
ಗಾರ್ಡನ್ಪೇಟೆಯ ನಾಲಬಂದ್ ಓಣಿಯಲ್ಲಿ ಡಬ್ಬಿ ಅಂಗಡಿ ಮೇಲೆ ದೊಡ್ಡದಾದ ಮರವೊಂದು ಉರುಳಿತು. ಇದರ ಕೊಂಬೆಗಳು ಮನೆಯೊಂದರ ಮೇಲೆ ಬಿದ್ದಿದ್ದರಿಂದ ಭಾಗಶಃ ಜಖಂಗೊಂಡಿತು. ಅದೃಷ್ಟವಶಾತ್ ಮನೆಗೆ ಬೀಗ ಹಾಕಲಾಗಿತ್ತು.
ಸಿ.ಬಿ.ಟಿ. ಮಕಾಂದರ್ ಓಣಿ ಮತ್ತು ನ್ಯೂ ಕಾಟನ್ ಮಾರುಕಟ್ಟೆಯಲ್ಲೂ ಎರಡು ಮರಗಳು ನೆಲಕ್ಕುರುಳಿವೆ. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಜೆ ವೇಳೆ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ಲ್ಯಾಮಿಂಗ್ಟನ್ ರಸ್ತೆಯ ಈದ್ಗಾ ಮೈದಾನ ಬಳಿ, ಹೊಸೂರ ವೃತ್ತ, ಜನತಾ ಬಜಾರ್, ಮೂರು ಸಾವಿರ ಮಠದ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತು ಕೆರೆ ನಿರ್ಮಾಣವಾಯಿತು. ವಾಹನ ಸವಾರರು ಮತ್ತು ಪಾದಚಾರಿಗಳ ಓಡಾಟಕ್ಕೆ ಅಡಚಣೆ ಉಂಟಾಯಿತು.
ಬೆಳಿಗ್ಗೆಯಿಂದ ಬಿಸಿಲಿನ ತಾಪ ಹೆಚ್ಚಾಗಿ ಸೆಕೆ ಇತ್ತು. ಸಂಜೆ ವೇಳೆ ಮೋಡ ಆವರಿಸಿಕೊಂಡು ಮಳೆ ಬರುವ ಮುನ್ಸೂಚನೆ ಇತ್ತು. ಆದರೆ, ಜೋರಾಗಿ ಗಾಳಿ ಬೀಸಿದ್ದರಿಂದ ಮಳೆ ಬರುವುದು ವಿಳಂಬವಾಯಿತು. ಸ್ವಲ್ಪ ಸಮಯದ ಬಳಿಕ ಜೋರು ಮಳೆ ಸುರಿಯಿತು.
ಹೀಗಾಗಿ, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿತು.ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ಮಳೆ ಜೋರಾಗಿ ಬಂದಿದ್ದರಿಂದ ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗಿದ್ದರಿಂದ ಚನ್ನಮ್ಮ ವೃತ್ತದಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಯಿತು.
ಲ್ಯಾಮಿಂಗ್ಟನ್ ರಸ್ತೆ, ನೀಲಿಜಿನ್ ರಸ್ತೆ, ಕೋರ್ಟ್ ವೃತ್ತ ಮತ್ತು ಹಳೇ ಬಸ್ ನಿಲ್ದಾಣ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳು ಹಾರನ್ಗಳು ಸುರಿಮಳೆಗರೆದವು. ಸಂಚಾರ ದಟ್ಟಣೆಯಲ್ಲಿ ಸಿಲುಕಿದ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ಸಿಲುಕಿ ತೊಯ್ದು ತೊಪ್ಪೆಯಾದರು.
ಜಾನಪದ ಜಾತ್ರೆ ವಿಳಂಬ: ನಗರದಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದರಿಂದ ಮೂರುಸಾವಿರ ಮಠದ ಆವರಣದಲ್ಲಿ ನಡೆಯಬೇಕಿದ್ದ ರಾಜ್ಯಮಟ್ಟದ ಜಾನಪದ ಜಾತ್ರೆ ಎರಡನೇ ದಿನ ಕಾರ್ಯಕ್ರಮ ಎರಡೂವರೆ ತಾಸು ವಿಳಂಬವಾಗಿ ಶುರುವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.