ಉಡುಪಿ: ಸಂಗೀತದಂತಹ ಕಲಾ ಪ್ರಕಾರಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಬದುಕು ಕೇವಲ ಯಾಂತ್ರಿಕತೆಗೆ ಸೀಮಿತವಾಗಿ ಬಿಡುತ್ತದೆ ಎಂದು ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.
ಚೆಂಗ್ಲಪೇಟ್ ರಂಗನಾಥನ್ ಅವರ ಸಂಸ್ಮರಣೆಯ ಅಂಗವಾಗಿ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಹಾಗೂ ಪರ್ಯಾಯ ಪೇಜಾವರ ಮಠದ ಸಂಯುಕ್ತ ಆಶ್ರಯದಲ್ಲಿ ನಗರದ ರಾಜಾಂಗಣದಲ್ಲಿ ಭಾನುವಾರ ನಡೆದ ಸಂಗೀತ ಕಾರ್ಯಾಗಾರ ಮತ್ತು ಸಂಗೀತ ಕಛೇರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಗೀತ, ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಜೀವನಕ್ಕೆ ನೆಮ್ಮದಿ ನೀಡುವ ಆಯಾಮಗಳು. ಆದರೆ, ನಾವು ಇಂದಿನ ಒತ್ತಡದ ಬದುಕಿನಲ್ಲಿ ಇವೆಲ್ಲವನ್ನು ಮರೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ಪ್ರತಿಭೆಯ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು, ಅದರ ಬಲವರ್ಧನೆಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಶ್ರವಣ, ಶಿಕ್ಷಣ ಮತ್ತು ಪ್ರದರ್ಶನ ಈ ಮೂರು ಕಲೆಯ ಬೆಳವಣಿಗೆಗೆ ಅವಶ್ಯಕ. ಸಂಗೀತ ಅಭ್ಯಾಸ ಮಾಡಿ ಅದನ್ನು ಪ್ರದರ್ಶಿಸದೆ ಹೋದರೆ, ಅವನು ಕಲಾವಿದನಾಗಲಾರ ಎಂದು ಕಲಾ ವಿಮರ್ಶಕ ಎ. ಈಶ್ವರಯ್ಯ ಅಭಿಪ್ರಾಯಪಟ್ಟರು. ಕಲಾವಿದೆ ಪ್ರಾರ್ಥನಾ ಸಾಯಿ ನರಸಿಂಹನ್, ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಉಪಸ್ಥಿತರಿದ್ದರು.