ಚಿಕ್ಕೋಡಿ: ‘ಜೀವನದಲ್ಲಿ ಯಶಸ್ವಿ ಆಗಬೇಕಾದರೆ ಶಿಕ್ಷಣ ಬಹು ಮುಖ್ಯ. ಇಂದಿನ ಆಧುನಿಕ ಯಂತ್ರ ಮಾನವನ ಯುಗದಲ್ಲಿ ಜಾಣತನಕ್ಕೆ ವಿಪುಲ ಅವಕಾಶಗಳಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿ ನಲ್ಲಿ ನಡೆದ 2016–17ನೇ ಶೈಕ್ಷಣಿಕ ಸಾಲಿನಲ್ಲಿ ಜರುಗಿದ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಸಲು ಹಾಗೂ ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ಹೊರಹೊಮ್ಮಿಸಲು ಹಮ್ಮಿಕೊಂಡಿದ್ದ 9ನೇ ವಾರ್ಷಿಕ ಸ್ನೇಹ ಸಮ್ಮೇಳನ ‘ಸಂಭ್ರಮ‘ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆ ಎಲ್ ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ ಅವರ ಕನಸಿನ ಕೂಸಾದ ಈ ಮಹಾವಿದ್ಯಾಲಯವು ಗಡಿ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿದೆ. ಇಲ್ಲಿ ಕಲ್ಪಿಸಿಕೊಟ್ಟ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣಾ ಮುನವಳ್ಳಿ, ‘ಜೀವನವು ಒಂದು ಸಕಾರಾತ್ಮಕ ಹೋರಾಟ. ಭಾವಿ ಎಂಜಿನಿಯರಗಳಾದ ತಾವು ನೌಕರಿಯ ಬೆನ್ನು ಬೀಳದೇ ಹತ್ತು ಜನರಿಗೆ ಉದ್ಯೋಗ ಕಲ್ಪಿಸಿಕೊಡುವತ್ತ ಗಮನ ಹರಿಸಬೇಕು.
ವಿದ್ಯಾಭ್ಯಾಸದ ಅವಧಿ ಯಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿ ಕೊಂಡರೆ ಮುಂದಿನ ಐವತ್ತು ವರ್ಷ ಗಳವರೆಗೆ ನಿಮ್ಮ ವೃತ್ತಿ ಜೀವನ ಫಲದಾಯಕವಾಗಿರುತ್ತದೆ’ ಎಂದರು.
ಪ್ರಾಚಾರ್ಯ ಡಾ. ಸಿದ್ರಾಮಪ್ಪ ಇಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಅಶ್ವಿನಿ ಗವಳಿ ಪರಿಚಯಿಸಿದರು. ಸೋನಿಯಾ ಕಾಗಲೆ ವಂದಿಸಿದರು.