ಚಾಮರಾಜನಗರ: ಮುಂದಿನ ವರ್ಷದ ಅಕ್ಟೋಬರ್ 2ರ ವೇಳೆಗೆ ರಾಜ್ಯವನ್ನು ಸಂಪೂರ್ಣ ಬಯಲು ಶೌಚಮುಕ್ತವಾಗಿಸುವ ಗುರಿಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ನಿರ್ಮಿಸಲಾಗಿರುವ ಜೆಎಸ್ಎಸ್ ಆಸ್ಪತ್ರೆ ಮತ್ತು ಜೆಎಸ್ಎಸ್ ಮಹಿಳಾ ಕಾಲೇಜು ಸುವರ್ಣ ಮಹೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಟ್ಟು 55 ಲಕ್ಷ ವೈಯಕ್ತಿಕ ಶೌಚಾಲಯಗಳ ಅಗತ್ಯವಿದೆ. ಅದರಲ್ಲಿ ಈಗಾಗಲೇ 28 ಲಕ್ಷ ಶೌಚಾಲಯಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಮುಂದಿನ ಅಕ್ಟೋಬರ್ 2ರ ಒಳಗೆ ಉಳಿದ 27 ಲಕ್ಷ ಶೌಚಾಲಯಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಶಿಕ್ಷಣದಲ್ಲಿ ಮಕ್ಕಳು ತಾಂತ್ರಿಕವಾಗಿ ಪ್ರಗತಿ ಸಾಧಿಸುವುದು ಇಂದಿನ ಅಗತ್ಯ. ಹೀಗಾಗಿ ಪಿಯುಸಿ ಮುಗಿಸಿ ವಿವಿಧ ವಿಭಾಗಗಳಲ್ಲಿ ಪದವಿಗೆ ಸೇರುತ್ತಿರುವ ಎಲ್ಲ ಜಾತಿಯ ಒಟ್ಟು 1.50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುವುದು ಎಂದರು.
ಜನರಿಗೆ ಉಪಯೋಗವಾಗಲಿ ಎಂದು ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುತ್ತಿದೆ. ಆದರೆ ಅದರಲ್ಲಿ ಪದವಿ ಪಡೆದವರು ನೇಮಕಾತಿ ಆದೇಶ ನೀಡಿದರೂ ಹಳ್ಳಿಗಳಲ್ಲಿ ಕೆಲಸ ಮಾಡಲು ಒಪ್ಪುತ್ತಿಲ್ಲ. ಈ ಮನೋಭಾವ ಬದಲಾಗಬೇಕು. ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
****
‘2,000 ತೊಟ್ಟೂ ನೀರು ಬಿಟ್ಟಿಲ್ಲ’
ಚಾಮರಾಜನಗರ: ಸುಪ್ರೀಂ ಕೋರ್ಟ್ನ ಆದೇಶವಿದ್ದರೂ ದಿನಕ್ಕೆ 2,000 ಕ್ಯುಸೆಕ್ ಅಲ್ಲ, 2,000 ತೊಟ್ಟು ನೀರನ್ನೂ ತಮಿಳುನಾಡಿಗೆ ಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದ ಜನರಿಗೆ ಕುಡಿಯುವ ನೀರನ್ನು ಉಳಿಸಿಕೊಳ್ಳುವ ಸಲುವಾಗಿ ಜೈಲಿಗೆ ಕಳುಹಿಸಿದರೂ ತೊಂದರೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಕ್ಕೆ ಮಣಿಯಲಿಲ್ಲ. ಈ ಬಗ್ಗೆ ವಿಶೇಷ ಅಧಿವೇಶನ ಕರೆದು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಜಲಾಶಯದಲ್ಲಿ ಉಳಿದಿರುವುದು ನಮ್ಮ ಜನರಿಗಾಗಿ ಇರುವ ಕುಡಿಯುವ ನೀರು. ಹೀಗಾಗಿ ಈಗಲೂ ಅದರಿಂದ ನೀರು ಹೊರಗೆ ಹರಿಸುವುದಿಲ್ಲ ಎಂದು ಅವರು ತಿಳಿಸಿದರು.