ಈ ಬಾರಿ ವಾಣಿಜ್ಯ ಬೆಳೆಗಳಾದ ಹತ್ತಿ, ಈರುಳ್ಳಿ ಮುಂತಾದ ಬೆಳೆಗಳನ್ನು ಹಾಕುವ ಸಾಹಸಕ್ಕೆ ಬಹುತೇಕ ರೈತರು ಮುಂದಾಗಿಲ್ಲ. ಕಾರಣ ಸತತ ಬರಗಾಲ ಕಲಿಸಿದ ಪಾಠ. ಸದ್ಯಕ್ಕೆ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರ ಮೊದಲ ಆದ್ಯತೆ ಆಗಿದೆ. ತಾಲ್ಲೂಕಿನಲ್ಲಿ ಸುಮಾರು 24ಸಾವಿರ ಹೆಕ್ಟೇರ್ ನಷ್ಟು ತೆಂಗು ಇದ್ದು, ಅದರಲ್ಲಿ ಶೇ 40 ರಷ್ಟು ತೋಟಗಳು ನಾಶವಾಗಿವೆ. ಉಳಿದದ್ದರಲ್ಲಿ ಬಹುತೇಕ ಫಸಲು ಇಲ್ಲದಂತಾಗಿದೆ. 14 ಸಾವಿರ ಹೆಕ್ಟೇರ್ ನಷ್ಟಿರುವ ಅಡಿಕೆ ತೋಟಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಚೆನ್ನಾಗಿ ಬಂದಿದ್ದರೂ ವಾಡಿಕೆ ಮಳೆಗಿಂತ ಬಿದ್ದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹಾಳಾಗಿರುವ ತೆಂಗು ಮತ್ತು ಅಡಿಕೆ ಗಿಡಗಳನ್ನು ತೆಗೆದು ಹೊಸದಾಗಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಕೂಡಲೇ ಕೈಹಾಕುವ ಬದಲು ಸ್ವಲ್ಪ ಸಮಯ ಮಳೆಗಾಗಿ ಕಾಯುವ ಯೋಚನೆ ರೈತರದ್ದು.