ಬಳ್ಳಾರಿ: ಇಲ್ಲಿನ ಬಳ್ಳಾರಿ ಕೋಟೆಯ ಮೇಲ್ಭಾಗದಿಂದ ಸೋಮವಾರ ಬೆಳಗಿನ ಜಾವ ಗುಡುಗು–ಸಿಡಿಲು ಸಹಿತ ಮಳೆಗೆ ಬೃಹತ್ ಬಂಡೆಯೊಂದು ಉರುಳಿ ಮನೆಗೆ ಬಿದ್ದು ಬಾಲಕನೊಬ್ಬ ಮೃತಪಟ್ಟು, ಆತನ ನಾಲ್ವರು ಸಂಬಂಧಿಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಶಿವರಾಜ್ (12) ಮೃತ ಬಾಲಕ. ಆತನ ಅಜ್ಜ ಬಸಪ್ಪ (55) ಅವರ ಕಾಲು ಮುರಿದಿದೆ. ಅಜ್ಜಿ ಯಲ್ಲಮ್ಮನ (50) ಸೊಂಟ ಮತ್ತು ಕಾಲಿನ ಎಲುಬು ಮುರಿದಿದ್ದು ಏಳಲಾರದ ಸ್ಥಿತಿಯಲ್ಲಿದ್ದಾರೆ, ಅವರ ಮೊಮ್ಮಕ್ಕಳಾದ ಜಯಶ್ರೀ (9) ಕಾಲು ಮುರಿದಿದೆ ಹಾಗೂ ಯಶೋಧ (15) ಹಣೆಗೆ ಗಾಯವಾಗಿದೆ.ಬೆಳಗಿನ ಜಾವ 2.30ರ ಸುಮಾರಿಗೆ ಘಟನೆ ನಡೆದಾಗ ಅವರೆಲ್ಲರೂ ಮಲಗಿದ್ದರು. ಅವರೊಂದಿಗೆ ಇದ್ದ ಇನ್ನಿಬ್ಬರು ಮೊಮ್ಮಕ್ಕಳಾದ ಲಾವಣ್ಯ ಮತ್ತು ಗೌತಮ ಪಾರಾಗಿದ್ದಾರೆ.
ಉರುಳಿಬಿತ್ತು: ಕೋಟೆಯ ತಳಭಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳಲ್ಲಿ ನೂರಾರು ಮಂದಿ ವಾಸವಾಗಿದ್ದು, ಅವರ ಪೈಕಿ ಬಸಪ್ಪ ಕುಟುಂಬವೂ ಒಂದು. ಕೋಟೆಯ ಮೇಲ್ಭಾಗದ ಇಳಿಜಾರಿನಿಂದ ಉರುಳಿದ ಬಂಡೆ ಅವರ ಮನೆ ಪಕ್ಕದ ಗೋಡೆಗೆ ಬಡಿದು, ನಂತರ ಅವರ ಮನೆಗೆ ನುಗ್ಗಿತ್ತು. ಆ ಕ್ಷಣದಲ್ಲಿ ಎಚ್ಚೆತ್ತುಕೊಂಡ ಯಲ್ಲಮ್ಮ ಮೊಮ್ಮಗನನ್ನು ಉಳಿಸಲೆಂದು ತನ್ನ ಮೇಲೆ ಎಳೆದುಕೊಂಡಿದ್ದರು.
ಆದರೆ ಬಂಡೆ ಆತನಿಗೆ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟ, ಯಲ್ಲಮ್ಮ ತೀವ್ರವಾಗಿ ಗಾಯಗೊಂಡರು. ಅವರ ಕೂಗಾಟ ಕೇಳಿದ ಸುತ್ತಮುತ್ತಲಿನ ನಿವಾಸಿಗಳು ಧಾವಿಸಿ ಬಂದು, ಬಂಡೆಯನ್ನು ಜರುಗಿಸಿ ಆಸ್ಪತ್ರೆಗೆ ದಾಖಲಿಸಿದರು ಎಂದು ಕೌಲ್ ಬಜಾರ್ ಠಾಣೆ ಪೊಲೀಸರು ತಿಳಿಸಿದ್ದಾರೆ,
₹ 1 ಲಕ್ಷ ಪರಿಹಾರ: ಮೇಯರ್ ಜಿ.ವೆಂಕಟರಮಣ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್, ಮೃತ ಬಾಲಕನ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ, ಗಾಯಾಳುಗಳಿಗೆ ತಲಾ ₹ಸಾವಿರ ಪರಿಹಾರ ಘೋಷಿಸಿದರು.