ಹೊನ್ನಾಳಿ: ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಆದ್ದರಿಂದ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನು ಬಳಸಿ ಭೂಮಿಯ ಫಲವತ್ತತೆ ಹೆಚ್ಚಿಸಬೇಕು ಎಂದು ರೈತ ಮುಖಂಡ ಭರ್ಮಪ್ಪಗೌಡ ಸಲಹೆ ನೀಡಿದರು.ತಾಲ್ಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಮಂಗಳವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಮಾರ್ಗಸೂಚಿಯಡಿ ತರಬೇತಿ: ಸರ್ಕಾರದ ಮಾರ್ಗಸೂಚಿಯಡಿ ಒಂದೇ ಗ್ರಾಮ ಅಥವಾ ಕ್ಲಸ್ಟರ್ ಆಯ್ಕೆ ಮಾಡಿ ಸುಮಾರು 250 ಎಕರೆ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಕೈಗೊಂಡು ಉತ್ಪಾದಕತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ರೇವಣಸಿದ್ದನಗೌಡ ಹೇಳಿದರು.
ಸರ್ಕಾರದ ಸೌಲಭ್ಯಗಳನ್ನು ವಿತರಿಸುವುದು, ತಾಂತ್ರಿಕತೆಯನ್ನು ಪರಿಚಯಿಸಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುವುದು ಸರ್ಕಾರದ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕೃಷಿ ಅಧಿಕಾರಿ ಶಂಷೀರ್ ಮಾತನಾಡಿ, ‘ಬಿದರಗಡ್ಡೆ ಗ್ರಾಮದಲ್ಲಿ ಹೆಚ್ಚು ಭತ್ತ ಬೆಳೆಗಾರರಿದ್ದಾರೆ. ಭತ್ತದ ಕಟಾವಿನ ನಂತರ ಹೊಲ ಉಳುಮೆ ಮಾಡಿ ಹಸಿರೆಲೆ ಗೊಬ್ಬರದ ಬೀಜಗಳಾದ ಡಯಂಚಾ, ಸೆಣಬು ಬೀಜಗಳನ್ನು ಚೆಲ್ಲಿ ನಾಟಿಗೆ ಮುಂಚೆ ಭೂಮಿ ಯಲ್ಲಿ ಸೇರಿಸಿದರೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರಗತಿಪರ ರೈತ ಕೊನಾಯಕನಹಳ್ಳಿ ರಂಗನಾಥ್ ಮಾತನಾಡಿ, ‘ಯಾಂತ್ರೀಕೃತ ನಾಟಿ ಬೇಸಾಯ ಕ್ರಮವನ್ನು ನಾವು ಕೈಗೊಂಡಿದ್ದೇವೆ. ಸಸಿಯಿಂದ ಸಸಿಗೆ ಅಂತವಿರುವುದರಿಂದ ಯಾವುದೇ ರೋಗ ಬಾಧೆ ಇರುವುದಿಲ್ಲ. ಕಳೆ ನಿರ್ವಹಣೆ ಸುಲಭವಾಗುತ್ತದೆ. ಖರ್ಚು ಕಡಿಮೆ, ಇಳುವರಿ ಜಾಸ್ತಿ’ ಎಂದರು.
ಸಹಾಯಕ ಕೃಷಿ ಅಧಿಕಾರಿ ನಾಗರಾಜ್ ಪಟೇಲ್, ನಿವೃತ್ತ ಶಿಕ್ಷಕ ಲೋಕರಾಜನ್, ನಿವೃತ್ತ ಅಧಿಕಾರಿ ಬಿ.ಎಚ್.ಮಂಜಪ್ಪ, ಗೋಪಾಲಪ್ಪ ಹಾಗೂ ‘ಆತ್ಮ’ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.