ಚಿತ್ರದುರ್ಗ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ 17 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪೈಕಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಮೂರು ಶಾಲೆಗಳು ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿವೆ.
ಚಿತ್ರದುರ್ಗ ತಾಲ್ಲೂಕು ಕೋಗುಂಡೆ (ಮಾರಘಟ್ಟ)(ಎಸ್ಸಿ), ಹಿರಿಯೂರು ತಾಲ್ಲೂಕು ದೇವರುಕೊಟ್ಟ (ಎಸ್ಸಿ) ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಹೊಸದುರ್ಗ ತಾಲ್ಲೂಕಿನ ನೀರಗುಂದದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು (ಎಸ್ಟಿ) ಶೇ 100ರಷ್ಟು ಫಲಿತಾಂಶ ಪಡೆದಿವೆ.
ಕೋಗುಂಡೆ ಶಾಲೆಯ ಎಚ್.ಟಿ. ರಂಗರಾಜು 604 ಅಂಕ ಪಡೆಯುವ ಮೂಲಕ 17 ಶಾಲೆಗ ಪೈಕಿ ಪ್ರಥಮ ಸ್ಥಾನ ಪಡೆದಿದ್ದಾನೆ. ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.
ಒಟ್ಟು 683 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 637 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 93.26ರಷ್ಟು ಫಲಿತಾಂಶ ಲಭ್ಯವಾಗಿದೆ. ಇದರಲ್ಲಿ 98 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 465, ದ್ವಿತೀಯ ಶ್ರೇಣಿಯಲ್ಲಿ 66 ಹಾಗೂ ತೃತೀಯ ಶ್ರೇಣಿಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉಳಿದ ಶಾಲೆಗಳು ಈ ರೀತಿ ಇವೆ: ಚಿತ್ರದುರ್ಗ ತಾಲ್ಲೂಕಿನ ಗೂಳಯ್ಯನಹಟ್ಟಿ (ಸಾಮಾನ್ಯ) ಶೇ 95.65, ಕೆ.ಆರ್.ಹಳ್ಳಿ (ಎಸ್ಸಿ) ಶೇ 82.92, ಹಿರಿಯೂರು ತಾಲ್ಲೂಕಿನ ದೇವರುಕೊಟ್ಟ(ಎಸ್ಸಿ) ಶೇ 97.82, ದೇವರುಕೊಟ್ಟ (ಹಿ.ವರ್ಗ) ಶೇ 97.91.ವಿವಿಪುರ (ಎಸ್ಸಿ) ಶೇ 97.77, ಐಮಂಗಲ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (ಎಸ್ಸಿ) ಶೇ 83.33. ಚಳ್ಳಕೆರೆ (ಎಸ್ಟಿ) ಶೇ 86.66, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (ಎಸ್ಟಿ) ಶೇ 89.13, ಹೊಳಲ್ಕೆರೆ ತಾಲ್ಲೂಕು ಬೊಮ್ಮನಕಟ್ಟೆ (ಎಸ್.ಟಿ) ಶೇ 94.28, ಹನುಮಂತದೇವರಕಣಿವೆ(ಅಲೆಮಾರಿ) ಶೇ 88.88, (ಎಸ್ಸಿ) ಶೇ 97.14, ಹೊಸದುರ್ಗ ತಾಲ್ಲೂಕು ನಾಗೇನಹಳ್ಳಿ (ಎಸ್ಟಿ) ಶೇ 84.09, ಮೊಳಕಾಲ್ಮುರು ತಾಲ್ಲೂಕು ಸೂಲೇನಹಳ್ಳಿ (ಎಸ್ಟಿ) ಶೇ 97.62, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ( ಎಸ್ಟಿ) ಶೇ 95.12.
ಅತ್ಯಧಿಕ ಅಂಕ ಪಡೆದವರು :ದೀಪಾ ಎಚ್. ಎಸ್ ಗೂಳಯ್ಯನಹಟ್ಟಿ (586), ಸಂಪೂರ್ಣ, ಕೆ.ಆರ್.ಹಳ್ಳಿ(549), ಶ್ರೀಧರ, ದೇವರುಕೊಟ್ಟ(569), ಯು.ನಯನಾ ದೇವರುಕೊಟ್ಟ (586), ಎಂ.ನಿಖಿತಾ ದೇವರುಕೊಟ್ಟ (587), ಎಂ.ಸುಷ್ಮಿತಾ ವಿವಿಪುರ (547), ಪಿ.ಎಸ್.ಐಶ್ವರ್ಯ ಐಮಂಗಲ (520), ಶ್ರೀಧರ, ಚಳ್ಳಕೆರೆ (553), ಟಿ.ಐಶ್ವರ್ಯ, ಚಳ್ಳಕೆರೆ (548), ಪವನ ಪಿ.ಒ, ಬೊಮ್ಮನಕಟ್ಟೆ (593), ಅನಿಲ್ ಕುಮಾರ್, ಹನುಮಂತದೇವರ ಕಣಿವೆ (570), ಎಸ್.ಎ.ಕಾವ್ಯಾ, ಹನುಮಂತ ದೇವರಕಣಿವೆ (588), ಕೆ.ಎನ್.ನಿತ್ಯ, ನಾಗೇನಹಳ್ಳಿ (603), ಸ್ನೇಹ ಕೆ.ಟಿ. ನೀರಗುಂದ (595), ಸರಿತಾ, ಸೂಲೇನಹಳ್ಳಿ (595), ಎ.ಗಂಗಮ್ಮ ಸೂಲೇನಹಳ್ಳಿ (601).
ಉತ್ತಮ ಬೋಧನೆ, ಕಠಿಣ ಅಧ್ಯಯನದ ಫಲ
‘ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರು ತೋರಿದ ಮುತುವರ್ಜಿ ಹಾಗೂ ಬೋಧನಾ ಕ್ರಮದಲ್ಲಾದ ಸುಧಾರಣೆ, ಕೋಗುಂಡೆ ಶಾಲೆಯಲ್ಲಿ ಶೇ 100ರಷ್ಟು ಫಲಿತಾಂಶ ಬರಲು ಕಾರಣ’ ಎಂದು ಪ್ರಾಚಾರ್ಯ ಟಿ. ಮಂಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ಶಾಲೆಯಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಅವರು,‘ಡಿಸೆಂಬರ್ ವೇಳೆಗೆ ಪಠ್ಯಗಳನ್ನು ಪೂರ್ಣಗೊಳಿಸಿ, ಜನವರಿಯಿಂದ ಹೊಸ ವೇಳಾಪಟ್ಟಿಯೊಂದಿಗೆ ಸಂಜೆ ವಿಶೇಷ ತರಗತಿ ಆರಂಭಿಸಿ, ಕಲಿಕೆಯಲ್ಲಿ ಹಿಂದುಳಿದಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ನಿಗಾ ಇಟ್ಟಿದ್ದು ಹಾಗೂ ಪ್ರತಿಯೊಬ್ಬ ಶಿಕ್ಷಕರು, ಇಂತಿಷ್ಟು ಮಕ್ಕಳನ್ನು ದತ್ತು ಪಡೆದು ಗಮನಹರಿಸಿದ್ದು ಉತ್ತಮಫಲಿತಾಂಶ ಬರಲು ಕಾರಣವಾಯಿತು’ ಎಂದು ಅವರು ಹೆಮ್ಮೆಯಿಂದ ವಿವರಿಸಿದರು.
ಮೊರಾರ್ಜಿ ವಸತಿ ಶಾಲೆಗಳಲ್ಲೇ ಪ್ರಥಮ ಸ್ಥಾನ ಪಡೆದ ಎಚ್.ಟಿ. ರಂಗರಾಜು ಕುರಿತು ವಿವರಣೆ ನೀಡಿದ ಅವರು ‘ಆತ ಬಡತನದಿಂದ ಬೆಳೆದು ಬಂದ ವಿದ್ಯಾರ್ಥಿ. ಬುದ್ಧಿವಂತನಾಗಿದ್ದ. ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದ. ಆತನ ಪರಿಶ್ರಮವೇ, ಉತ್ತಮ ಫಲಿತಾಂಶಕ್ಕೆ ಕಾರಣ’ ಎಂದರು.
‘ನಿರಂತರ ಅಭ್ಯಾಸ’
‘ಆರು ಗಂಟೆ ಅಭ್ಯಾಸ, ವಿವರವಾದ ಉತ್ತರಗಳನ್ನು ಸಣ್ಣದಾಗಿ ಮಾಡಿಕೊಂಡು ಅರ್ಥೈಸಿ ಕೊಳ್ಳುವುದು, ಶಿಕ್ಷಕರು ನೀಡಿದ ವಿಶೇಷ ತರಗತಿಗಳಿಂದಾಗಿ, ಇಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಯಿತು...’ ಹೀಗೆ ಎಲ್ಲವನ್ನೂ ನೆನಪಿಸಿಕೊಂಡಿದ್ದು ಮೊರಾರ್ಜಿ ಶಾಲೆಗಳಲ್ಲೇ ಹೆಚ್ಚು ಅಂಕ ಪಡೆದ ಕೋಗುಂಡೆ ಶಾಲೆಯ ವಿದ್ಯಾರ್ಥಿ ಎಚ್.ಟಿ.ರಂಗರಾಜು.
ಹಿರಿಯೂರು ತಾಲ್ಲೂಕು ಜವನ ಗೊಂಡನಹಳ್ಳಿಗೆ 3 ಕಿ.ಮೀ (ಇದು ಸಿರಾ ತಾಲ್ಲೂಕಿಗೆ ಸೇರುತ್ತದೆ) ದೂರದ ಹುಣಸೆಹಳ್ಳಿಯ ತಿಮ್ಮರಾಯ – ಲತಾ ದಂಪತಿಯ ಮಗ ಈತ.
ಜವನಗೊಂಡನಹಳ್ಳಿ ಖಾಸಗಿ ಶಾಲೆಯಲ್ಲಿ ಓದಿದ್ದರಿಂದ, 6ನೇ ತರಗತಿಗೆ ಕೋಗುಂಡೆ ಮೊರಾರ್ಜಿ ಶಾಲೆ ಸೇರಿದ. ಆರಂಭದಿಂದಲೂ ಇಂಗ್ಲಿಷ್ ಮಾಧ್ಯಮದಲ್ಲೇ ಓದಿದ್ದು, ಈಗ ವೈದ್ಯನಾಗುವ ಗುರಿ ಹೊಂದಿದ್ದಾನೆ. ಅಷ್ಟಾಗಿ ಶೈಕ್ಷಣಿಕ ಸಿರಿವಂತಿಕೆ ಇಲ್ಲದ ಈ ಕುಟುಂಬಕ್ಕೆ ಎರಡು ಎಕರೆ ಜಮೀನು, ಒಂದಷ್ಟು ಕುರಿಗಳಷ್ಟೇ ಆಸರೆ, ಆದರೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ.
‘ಅಂದಿನ ಪಾಠ ಅಂದೇ ಓದುವುದು, ಉತ್ತರಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಓದುವ ಅಭ್ಯಾಸ ಬೆಳೆಸಿ ಕೊಳ್ಳುವುದರಿಂದ ಪರೀಕ್ಷೆ ಹೊರೆ ಎನಿಸಲಿಲ್ಲ’ ಎಂದು ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡ ರಂಗರಾಜು.
ಈತನಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ – 123, ಇಂಗ್ಲಿಷ್ – 98, ಹಿಂದಿ – 94, ಗಣಿತ – 98, ವಿಜ್ಞಾನ –93, ಸಮಾಜ ವಿಜ್ಞಾನದಲ್ಲಿ–98 ಅಂಕಗಳು ಬಂದಿವೆ. ವಿಜ್ಞಾನ ಮತ್ತು ಹಿಂದಿಯಲ್ಲಿ ತುಂಬಾ ಆಸಕ್ತಿ ಹೊಂದಿರುವ ರಂಗರಾಜುಗೆ, ಗಣಿತ ಮತ್ತು ಸಮಾಜದಲ್ಲಿ ಎರಡು ತಪ್ಪುಗಳಿಂದ ಅಂಕಗಳು ಕಡಿಮೆಯಾಗಿವೆ’ ಎಂದು ನಿಖರವಾಗಿ ಹೇಳುತ್ತಾನೆ. ಪಠ್ಯದಲ್ಲಷ್ಟೇ ಅಲ್ಲದೇ, ಪಠ್ಯೇತರ ಚಟುವಟಿಕೆಯಲ್ಲೂ ಮುಂದಿರುವ ಈತನಿಗೆ, ಸಾಂಸ್ಕೃತಿಕ ಚಟುವಟಿಕೆಗಳೂ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿವೆ.
ಫಲಿತಾಂಶ:
77.64 ಜಿಲ್ಲೆಯ ಒಟ್ಟು ಫಲಿತಾಂಶ
93.26 ವಸತಿ ಶಾಲೆಗಳ ಫಲಿತಾಂಶ
95ಕ್ಕೂ ಅಧಿಕ ಅಂಕ ತೆಗೆದವರು ಹೆಚ್ಚು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.