ಭಾಲ್ಕಿ: ‘ಗ್ರಾಮದ ಕೆರೆಗಳಲ್ಲಿ ಶೇಖರಣೆಗೊಂಡಿರುವ ಹೂಳನ್ನು ಆಗಾಗ್ಗೆ ತೆಗೆಯಬೇಕು. ಕೆರೆ ಪುನಶ್ಚೇತನದಿಂದ ನೀರಿನ ಮಟ್ಟ ವೃದ್ಧಿ ಆಗುವುದಲ್ಲದೇ ಕೃಷಿ ಕಾರ್ಯಕ್ಕೂ ಅನುಕೂಲ ಆಗುತ್ತದೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಹೇಳಿದರು.
ತಾಲ್ಲೂಕಿನ ಲಖನಗಾಂವ ಗ್ರಾಮದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ನಡೆದ ಕೆರೆ ಹೊಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶ್ರೀಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ಕೆರೆ ಪುನಃಶ್ಚೇತನವೂ ಒಂದು. ಹೂಳು ತುಂಬಿಕೊಂಡಿರುವ ಕೆರೆ ಪುನಃಶ್ಚೇತನಗೊಳಿಸಲು ಅನುದಾನ ಮಂಜೂರಾಗಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೆರೆ ಅಭಿವೃದ್ಧಿಪಡಿಸಲು ಗ್ರಾಮಸ್ಥರು ಸಹಕರಿಸಬೇಕು’ ಎಂದರು.
ಅಂಬಾದಾಸ ಮಹಾರಾಜ ಮಾತನಾಡಿ, ‘ಶ್ರೀಕ್ಷೇತ್ರ ಧರ್ಮಸ್ಧಳ ದಾನ, ಧರ್ಮ ಮಾಡುವ ಕ್ಷೇತ್ರ. ಇದರ ಮುಖಾಂತರ ನಮ್ಮ ಊರಿನ ಕೆರೆ ಅಭಿವೃದ್ಧಿಪಡಿಸಲು ಸ್ವಯಂ ಪ್ರೇರಿತವಾಗಿ ಅನುದಾನ ನೀಡಿರುವುದು ಗ್ರಾಮಸ್ಥರ ಸೌಭಾಗ್ಯ’ ಎಂದರು.
ಬೀದರ ಜಿಲ್ಲಾ ಘಟಕದ ನಿರ್ದೇಶಕ ಪ್ರವೀಣಕುಮಾರ ಪ್ರಾಸ್ತಾವಿಕ ಮಾತನಾಡಿದರು.ಲಖಣಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ದತ್ತಾತ್ರಿ ಬೊಬಡೆ, ತಾಲ್ಲೂಕು ಪಂಚಾಯಿತಿ ಸದಸ್ಯ ಸಂತಾಜಿ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜನಾರ್ಧನ ಸೂರ್ಯವಂಶಿ, ಜ್ಯೋತಿ ಉಪಸ್ಥಿತರಿದ್ದರು.
ತಾಲ್ಲೂಕು ಯೋಜನಾಧಿಕಾರಿ ನಾರಾಯಣ ಜಿ. ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ನಿಸ್ಸಾರ್ ಅಹಮ್ಮದ್ ನಿರೂಪಿಸಿದರು, ಭಾತಂಬ್ರಾ ವಲಯ ಮೇಲ್ವಿಚಾರಕ ಯಾಸ್ಮಿನ್ ವಂದಿಸಿದರು.
*
ಕೆರೆಗಳಲ್ಲಿನ ಹೂಳನ್ನು ಆಗಾಗ್ಗೆ ತೆರವುಗೊಳಿಸಿದ್ದಲ್ಲಿ ಹಲವು ರೀತಿ ಪ್ರಯೋಜನವಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿ ಆಗುವುದಲ್ಲದೇ ನೀರು ಶುದ್ಧವಿರುತ್ತದೆ. ದುಗ್ಗೇಗೌಡ, ಪ್ರಾದೇಶಿಕ ನಿರ್ದೇಶಕ,
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ