ಬಾಳೆಹೊನ್ನೂರು: ರೈತರ ಅನುಕೂಲಕ್ಕಾಗಿ ಸರ್ಕಾರ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದು, ಅದರ ಸದುಪಯೋಗ ಆಗಬೇಕು ಗೃಹ ಸಚಿವ ಡಾ.ಪರಮೇಶ್ವರ್ ಸಲಹೆ ನೀಡಿದರು.
ಅವರು ಪಟ್ಟಣದ ಮೀನು ಮಾರು ಕಟ್ಟೆ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸುಮಾರು ₹ 79 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಂತೆ ಮಾರುಕಟ್ಟೆ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತ ನಾಡಿದರು.
ನರಸಿಂಹರಾಜಪುರ ಬಳಿಯ ಮುತ್ತಿನಕೊಪ್ಪದಲ್ಲೂ ಸಂತೆ ಮಾರುಕಟ್ಟೆ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಅದಕ್ಕೆ ₹ 22 ಲಕ್ಷ ವ್ಯಯ ಮಾಡಲಾ ಗುತ್ತಿದೆ. ಎರಡೂ ಕಾಮಗಾರಿಗಳಿಗೂ ಇಲ್ಲೇ ಶಂಕುಸ್ಥಾಪನೆ ಮಾಡಿದ್ದು, ಶೀಘ್ರದಲ್ಲೇ ಯೋಜನೆ ಪೂರ್ಣ ಗೊಳ್ಳಲಿದೆ ಎಂದರು ಹೇಳಿದರು.
ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ‘ಕ್ಷೇತ್ರದಲ್ಲಿ ಹಲವು ಕಾಮಗಾ ರಿಗಳಿಗೆ ಅನುಮೋದನೆ ಸಿಕ್ಕಿದೆ. ಪ್ರಮು ಖವಾಗಿ ಪಟ್ಟಣದ ಜೇಸಿ ವೃತ್ತದಿಂದ ರಂಭಾಪುರಿ ಪೀಠಕ್ಕೆ ತೆರಳುವ ಕೆರೆಯ ವರೆಗಿನ ರಸ್ತೆ ಕಾಂಕ್ರಿಟಿಕರಣ, ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ₹ 2 ಕೋಟಿ ಬಿಡುಗಡೆ ಯಾಗಿದೆ’ ಎಂದ ಅವರು, ಸಂತೆ ಮಾರುಕಟ್ಟೆ ರಸ್ತೆ ಡಾಂಬರೀಕರಣಕ್ಕೆ ಅನುದಾನ ಕೊಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಸತ್ಯವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಜಿಲ್ಲಾ ಪಂಚಾಯಿತಿ ಸಿಇಒ ರಾಗಪ್ರಿಯ, ಕೊಪ್ಪ ಎಪಿಎಂಸಿ ಅಧ್ಯಕ್ಷ ಓಣಿತೋಟ ರತ್ನಾಕರ್, ನರಸಿಂಹರಾಜಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೋಹನ್, ಎ.ಎನ್. ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ, ಟಿ.ಎಂ.ನಾಗೇಶ್, ಹೊಳೆ ಬಾಗಿಲು ಮಂಜು, ಹಿರಿಯಣ್ಣ ಇದ್ದರು.
**
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ
ಬಾಳೆಹೊನ್ನೂರು: ಅರ್ಡರ್ಲಿ ಪದ್ಧತಿಗೆ ಪರ್ಯಾಯ ವ್ಯವಸ್ಥೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವೇ ತಿಂಗಳಲ್ಲಿ ಹಿಂದಿದ್ದ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತೇವೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೈಕಮಾಂಡಿಗೆ ಬಿಟ್ಟಿದ್ದು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧ’ ಎಂದರು.
‘ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಎದುರಾಗಿದೆ. ಎರಡೂ ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪ್ರಧಾನಿಯನ್ನು ಭೇಟಿ ಮಾಡಿ ₹ 17 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿ ನೀಡಿದ್ದರು. ಬರದ ನಷ್ಟ ಭರಿಸಲು ಕೇಂದ್ರವು ₹ 5,500 ಕೋಟಿ ರಾಜ್ಯಕ್ಕೆ ನೀಡಬೇಕಾಗಿತ್ತು. ಆದರೆ, ಕೇವಲ ₹ 1,500 ಕೋಟಿ ನೀಡಿದೆ. ಬರದ ಆರಂಭದಲ್ಲೇ ಬಿಜೆಪಿ ಮುಖಂಡರು, ಸಂಸದರು ಬರ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ಒತ್ತಡ ಹೇರಿ ಹೆಚ್ಚು ಅನುದಾನ ಕೊಡಿಸಿದ್ದರೆ ಅನುಕೂಲವಾಗುತ್ತಿತ್ತು. ಈಗ ಅಧ್ಯಯನ ಪ್ರವಾಸ ಮಾಡುವುದು ರಾಜಕೀಯ ಕಾರಣಕ್ಕಾಗಿ’ ಎಂದು ಅವರು ಟೀಕಿಸಿದರು.
‘ನಾವು ಸಾಧನಾ ಸಮಾವೇಶ ನಡೆಸಿಲ್ಲ. ರಾಜ್ಯದ ಮಹಿಳಾ ಮಕ್ಕಳ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಹಲವು ವಿಭಾಗಗಳಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಇಷ್ಟೆಲ್ಲಾ ನೀಡಿ ನಮ್ಮ ಸರ್ಕಾರದ ಮೇಲೆ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಿರುವುದು ವಿಪರ್ಯಾಸ’ ಎಂದು ಹೇಳಿದರು.
‘ಸರ್ಕಾರ ಯಥೇಚ್ಚವಾಗಿ ಸಾಲ ತೆಗೆದುಕೊಂಡಿಲ್ಲ. ಇನ್ನೂ ನಮಗೆ ₹ 40ರಿಂದ 50 ಸಾವಿರ ಕೋಟಿ ಸಾಲ ಪಡೆಯುವ ಅವಕಾಶ ಇದೆ. ಅದರೂ ಅದನ್ನು ತೆಗೆದುಕೊಂಡಿಲ್ಲ’ ಎಂದರು.
**
ನಾಲ್ಕು ವರ್ಷದಲ್ಲಿ ಬಹುತೇಕ ಎಲ್ಲ ಭರವಸೆಗಳನ್ನೂ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಉಳಿದ 35–40 ಭರವಸೆಗಳನ್ನು ಚುನಾವಣೆಗೂ ಮುನ್ನ ಈಡೇರಿಸುತ್ತೇವೆ.
-ಡಾ.ಜಿ.ಪರಮೇಶ್ವರ್
ಜಿಲ್ಲಾ ಉಸ್ತುವಾರಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.