ಯಲಬುರ್ಗಾ: ನಿರುದ್ಯೋಗಿ ಯುವಕ, ಯುವತಿಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಸ್ಥಳೀಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿವರ್ಷ ಸುಮಾರು ನಾಲ್ಕು ಲಕ್ಷ ಜನರು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಅದರ ತಕ್ಕಂತೆ ಸೂಕ್ತ ಉದ್ಯೋಗ ಲಭಿಸದೇ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಪ್ರಮಾಣವನ್ನು ಕಡಿಮೆಗೊಳಿಸುವುದು ಹಾಗೂ ಉದ್ಯೋಗ ಮಾಡುವ ಕೈಗಳಿಗೆ ಕೆಲಸ ಕೊಡುವ ಉದ್ದೇಶದಿಂದ ಸೂಕ್ತ ಕೌಶಲ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿಯೇ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು. ಉದ್ಯೋಗ ಮಾಡುವ ವಿಧಾನ ಮತ್ತು ವಿವಿಧ ಉದ್ಯೋಗಗಳ ಕುರಿತು ಮಾಹಿತಿ ನೀಡುವ ಕೆಲಸ ಈ ಕೇಂದ್ರ ಮಾಡುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಯುವಪಡೆ ಮುಂದಾಗಬೇಕು ಎಂದರು.
ಯಲಬುರ್ಗಾದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಿದ್ದು, ಬರುವ ಶೈಕ್ಷಣಿಕ ವರ್ಷದಿಂದಲೇ ವಿವಿಧ ವಿಷಯಗಳ ತರಗತಿಗಳು ಪ್ರಾರಂಭವಾಗಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಹಾಗೂ ಸ್ಥಾನಮಾನ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ತಹಶೀಲ್ದಾರ ರಮೇಶ ಅಳವಂಡಿಕರ, ಇಒ ಕೆ.ತಿಮ್ಮಪ್ಪಪಟ್ಟಣ ಪಂಚಯಿತಿ ಅಧ್ಯಕ್ಷೆ ಜಯಶ್ರೀ ಅರಕೇರಿ, ತಾಪಂ ಅಧ್ಯಕ್ಷೆ ದ್ಯಾಮಮ್ಮ ಗೌಡ್ರ, ಜಿಪಂ ಸದಸ್ಯ ಗಿರಿಜಾ ಸಂಗಟಿ, ಹನಮಂತಗೌಡ ಪಾಟೀಲ, ಮಹಿಬೂಬಸಾಬ ಕನಗಿರಿ, ರಾಮಶೆಟ್ಟಿ, ಕೆ. ತಿಮ್ಮಪ್ಪ ಇದ್ದರು.