ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಿಂದ ಐತಿಹಾಸಿಕ ಬಾವಡಿ ಪರಿಶೀಲನೆ

Last Updated 17 ಮೇ 2017, 7:03 IST
ಅಕ್ಷರ ಗಾತ್ರ

ವಿಜಯಪುರ: ಸೋಮವಾರ ಬೆಳಿಗ್ಗೆ ಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ. ತುಂತುರು ಮಳೆ ಹನಿಯುವ ಸಾಧ್ಯತೆ ಹೆಚ್ಚಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಐತಿಹಾ ಸಿಕ ಬಾವಡಿಗಳ ಪ್ರದಕ್ಷಿಣೆ ನಡೆಸಿತು.

ತಂಡ ಭೇಟಿ ನೀಡಿದ ಪ್ರತಿ ಬಾವಡಿ ಯಲ್ಲೂ ‘ಕಾಯಕಲ್ಪ’ದ ಕಾಮಗಾರಿ ಬಿರುಸಿನಿಂದ ನಡೆದಿತ್ತು. ಹಿಟಾಚಿ, ಜೆಸಿಬಿ, ಕ್ರೇನ್‌ ಸೇರಿದಂತೆ ಬೃಹತ್‌ ಮೋಟರ್‌ನ ಸದ್ದು ಅಲ್ಲಿ ಮಾರ್ದನಿಸುತ್ತಿತ್ತು.

ಹಲ ವರ್ಷಗಳಿಂದ ನಗರದ ತ್ಯಾಜ್ಯ ತುಂಬಿಕೊಂಡು ಶಿಥಿಲಾವಸ್ಥೆ ತಲುಪಿದ್ದ ಬಹುತೇಕ ಬಾವಡಿಗಳ ತಳ ದರ್ಶನ ಗೊಂಡಿತು. ಎರಡ್ಮೂರು ತಲೆಮಾರು ಕಂಡವರು ಸಹ ಅತ್ಯಂತ ಭೀಕರ ಬರದಲ್ಲೂ ಈ ಬಾವಡಿಗಳ ತಳ ನೋಡಿಲ್ಲ ಎಂಬ ಉದ್ಗಾರ ತೆಗೆದರು.

70–80 ಅಡಿ ಆಳದ ಬಾವಡಿ ಯೊಳಗೆ ಬೃಹತ್ ಯಂತ್ರೋಪಕರಣ ಗಳನ್ನು ಕ್ರೇನ್‌ ಸಹಾಯದಿಂದ ಕೆಳಗಿಳಿಸ ಲಾಗಿತ್ತು. ಒಂದೆಡೆ ಬೃಹತ್ ಮೋಟರ್‌ ಅಳವಡಿಸಿ ಅಶುದ್ಧ ನೀರನ್ನು ಹೊರ ಹಾಕುವ ಕಾಯಕ ನಡೆಯುತ್ತಿದ್ದರೆ, ಇನ್ನೊಂದೆಡೆ ಬಾವಡಿಯೊಳಗಿದ್ದ ಹಿಟಾಚಿ ಕಂಟೈನರ್‌ಗಳಿಗೆ ಹೂಳು, ಕೆಸರು ತುಂಬುತ್ತಿತ್ತು.

ಈ ಕಂಟೈನರ್‌ಗಳನ್ನು ಬಾವಡಿಯ ಮೇಲ್ಭಾಗದಲ್ಲಿ ಅಳವಡಿಸಿದ್ದ ಕ್ರೇನ್‌ ನಿಂದ ಎತ್ತಿಕೊಂಡು ಡಂಪರ್‌ ಲಾರಿ ಗಳಿಗೆ ತುಂಬಲಾಗುತ್ತಿತ್ತು. ಡಂಪರ್‌ಗಳು ಹೂಳನ್ನು ನಗರದ ಹೊರ ವಲಯಕ್ಕೆ ಹೊತ್ತೊಯ್ಯುತ್ತಿದ್ದ ದೃಶ್ಯಾವಳಿ ಬಹುತೇಕ ಬಾವಡಿಗಳ ಬಳಿ ‘ಪ್ರಜಾವಾಣಿ’ಗೆ ಗೋಚರಿಸಿತು.

ಇಬ್ರಾಹಿಂಪುರ ಬಾವಡಿ 80 ಅಡಿ ಗಿಂತಲೂ ಹೆಚ್ಚು ಆಳವಿದೆ. ಆದಿಲ್‌ಶಾಹಿ ಅರಸರ ವಾಸ್ತುಶಿಲ್ಪ ವೈಭವಕ್ಕೆ ಕನ್ನಡಿ ಹಿಡಿದಂತಿದೆ. ಸಂರಕ್ಷಿತ ಸ್ಮಾರಕ ಎಂದು ಘೋಷಿಸಲ್ಪಟ್ಟಿದ್ದರೂ, ಎಲ್ಲರಿಂದಲೂ ನಿರ್ಲಕ್ಷ್ಯಿತಗೊಂಡಿತ್ತು.

ಈ ಬಾವಡಿಯೊಳಗೆ ಹಿಟಾಚಿ, ಟ್ರ್ಯಾಕ್ಟರ್‌, ಬೃಹತ್‌ ಮೋಟರ್‌ ಅಳ ವಡಿಸಿ ಅಶುದ್ಧ ನೀರು ಖಾಲಿ ಮಾಡುವ ಜತೆಗೆ, ಹೂಳನ್ನು ತೆಗೆಯಲಾಗುತ್ತಿತ್ತು. ತಳ ತಲುಪುವ ಮುನ್ನವೇ ಜಲಮೂಲ ತೆರೆದುಕೊಂಡು ನೀರು ಎಲ್ಲೆಡೆ ಚಿಮ್ಮುತ್ತಿತ್ತು. ಕೆಲವೆಡೆ ಬಸಿಯುವ ದೃಶ್ಯ ಕಂಡಿತು.

ಮಹಿಳೆಯರು ಭಾಗಿ:  ರಹೀಮ್‌ ನಗರ ದಲ್ಲಿನ ಬಾವಡಿ ಬಯಲು ಪ್ರದೇಶದ ಲ್ಲಿದೆ. ಯಾವ ಮುನ್ನೆಚ್ಚರಿಕೆ ಕ್ರಮ ಗೋಚರಿಸಲಿಲ್ಲ. ಇನ್ನೊಂದು ಬದಿಯಿಂದ ಬಾವಡಿ ಯೊಳಗಿಳಿಯಲು ಸುಸಜ್ಜಿತ ಮೆಟ್ಟಿಲುಗಳಿವೆ. ಶತಮಾನದ ಹಿಂದೆ ನಿರ್ಮಾಣಗೊಂಡಿದ್ದರೂ ಇಂದಿಗೂ ವ್ಯವಸ್ಥಿತವಾಗಿದೆ.

ಇಲ್ಲಿನ ಸ್ವಚ್ಛತಾ ಕೆಲಸದಲ್ಲಿ ಮಹಿಳೆ ಯರು ತೊಡಗಿಸಿಕೊಂಡಿದ್ದು ವಿಶೇಷ. ಈ ಬಾವಡಿಯೊಳಗೆ ಬೃಹತ್ ಯಂತ್ರೋಪ ಕರಣ ಕೆಳಗಿಳಿಸದಿದ್ದರೂ, ಕೆಲ ಪುರು ಷರು ಹೂಳು ತೆಗೆಯುತ್ತಿದ್ದರು. ಪುಟ್ಟ ಪುಟ್ಟ ಕಂಟೈನರ್‌ಗಳನ್ನು ಮಹಿಳೆಯರು ರಾಟೆಯ ಮೂಲಕ ಮೇಲೆಳೆಯುವ ಕಸರತ್ತು ನಡೆಸುತ್ತಿದ್ದು ಕಂಡು ಬಂತು.

ಸ್ವಚ್ಛತೆ ಪೂರ್ಣ: ಗುಂಡ ಬಾವಡಿಯ ಸ್ವಚ್ಛತಾ ಕಾರ್ಯ ಸಂಪೂರ್ಣಗೊಂಡಿದೆ. 30 ಅಡಿ ನೀರು ಶೇಖರಣೆಗೊಂಡಿದೆ. ಇದೇ ರೀತಿ ಪೋಸ್ಟ್‌ ಆಫೀಸ್‌ ಬಾವ ಡಿಯ ಸ್ವಚ್ಛತೆಯೂ ಪೂರ್ಣಗೊಂಡು, ನೀರು ಈಗಾಗಲೇ ಬಳಕೆಯಾಗುತ್ತಿದೆ. ಆದರೆ ಸ್ವಚ್ಛತೆಯ ಬೆನ್ನಿಗೆ ಬಾವಡಿ ಯೊಳಗೆ ಕಸ ಬಿದ್ದಿತ್ತು.

ಕುರುಹು: ಸಂರಕ್ಷಿತ ಪ್ರದೇಶದಲ್ಲಿರುವ ಬಾವಡಿಯ ಕುರುಹು ಸಿಗದಂತಿರು ವುದು ಜಗದ್ವಿಖ್ಯಾತ ಗೋಳಗುಮ್ಮಟದ ಆವರಣದಲ್ಲಿ. ಇಲ್ಲಿನ ಬಾವಡಿ ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. ಸುತ್ತಲಿನ ಕಟ್ಟಡ ಇಲ್ಲವಾಗಿದೆ. ಅಲ್ಲಲ್ಲೇ ಕಟ್ಟಡದ ಕುರುಹು ಗೋಚರಿಸಿತು.

ಹೂಳನ್ನು ಸನಿಹದಲ್ಲೇ ಬಿಡಲಾಗಿದೆ. ಸಾಕಷ್ಟು ಹೂಳು ತುಂಬಿದ್ದು, ಇನ್ನೂ 15 ಅಡಿ ಆಳ ತೆಗೆಯಬೇಕು ಎಂದು ಸ್ಥಳದಲ್ಲಿ ಕೆಲಸದಲ್ಲಿ ನಿರತರಾಗಿದ್ದವರು ತಿಳಿಸಿದರು.
ಗೋಳಗುಮ್ಮಟದ ಉದ್ಯಾನಕ್ಕೆ ನೀರು ಪೂರೈಸುತ್ತಿದ್ದ ಮಾಸ ಬಾವಡಿಯ ಸ್ವಚ್ಛತೆಯೂ ನಡೆದಿದೆ. ಇದರ ಬೆನ್ನಿಗೇ ನೀರು ಸಂಗ್ರಹಗೊಳ್ಳುತ್ತಿದೆ.

ಗೋಚರಿಸಿದ ಗಣಪ...
ತ್ಯಾಜ್ಯ ಬಾವಡಿ ಎಂದೇ ಈಚೆಗಿನ ದಿನಗಳಲ್ಲಿ ಹೆಸರಾಗಿದ್ದ ತಾಜ್‌ಬಾವಡಿಯ ಅಶುದ್ಧ ನೀರನ್ನು ಸಂಪೂರ್ಣವಾಗಿ ಹೊರ ಹಾಕಲಾಗಿದೆ. ಬೋಟ್‌ ಬಳಸಿ ನೀರು ಮೇಲೆತ್ತಿರುವುದು ಇಲ್ಲಿನ ವಿಶೇಷ. ಈ ಸಂದರ್ಭ ಪರ್ಶಿಯನ್‌ ಶಾಸನವೊಂದು ಪತ್ತೆಯಾಗಿದೆ.

ಆದಿಲ್‌ಶಾಹಿ ಅರಸರ ಕಾಲದ ತಾಮ್ರದ ನಾಣ್ಯಗಳು ಲಭ್ಯವಾಗಿವೆ. ಇವನ್ನು ಸಂಶೋಧಕರಿಗೆ ಹೆಚ್ಚಿನ ಅಧ್ಯಯನಕ್ಕಾಗಿ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಹರ್ಷಶೆಟ್ಟಿ ತಿಳಿಸಿದರು.

23 ಅಡಿಯಷ್ಟು ಹೂಳು ಹೊರ ತೆಗೆಯಲಾಗಿದೆ. ಇನ್ನೂ ಅಂದಾಜು 15 ಅಡಿ ಆಳದಷ್ಟು ಹೂಳು ತೆಗೆಯುವ ಕಾರ್ಯ ನಡೆಸಬೇಕಿದೆ. ಬಾವಡಿಯ ತಳದಲ್ಲಿ ಪಿಓಪಿ ಗಣಪ ಮೂರ್ತಿಗಳು ಕರಗದೆ ಗೋಚರಿಸಿದವು.

*

ವಿವಿಧ ಸಂಸ್ಥೆಗಳ ಸಿಎಸ್ಆರ್ ಅನುದಾನದಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ವಚ್ಛಗೊಳಿ ಸುವುದು ನಮ್ಮ ಜವಾಬ್ದಾರಿ. ಕಾಪಾಡಿ ಕೊಳ್ಳುವುದು ಇಲ್ಲಿನವರ ಹೊಣೆ
ಎಂ.ಬಿ.ಪಾಟೀಲ
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT