ಹಿರೇಕೆರೂರ: ‘ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಬೇಕಾದ ರಾಸಾಯನಿಕ ಗೊಬ್ಬರಗಳನ್ನು ಸಂಘದ ಎಲ್ಲ ಶಾಖೆಗಳಲ್ಲಿ ಸಾಕಷ್ಟು ದಾಸ್ತಾನು ಮಾಡಲಾಗಿದೆ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ ಹೇಳಿದರು.
ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ಇತ್ತೀಚೆಗೆ ಇಫ್ಕೋ ಹಾಗೂ ಟಿಎಪಿಸಿಎಂಎಸ್ ಆಶ್ರಯದಲ್ಲಿ ನಡೆದ ಪಿಕೆಪಿಎಸ್ ಸಂಘಗಳ ಮಾರಾಟಗಾರರಿಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ರಾಜ್ಯದಲ್ಲಿ ಹಿರೇಕೆರೂರ ಟಿಎಪಿಸಿಎಂಎಸ್ ಎಲ್ಲ ಸಹಕಾರಿ ಸಂಘಗಳ ಮೂಲಕ ಹೆಚ್ಚು ಗೂಬ್ಬರ ಮಾರಾಟ ಮಾಡುವ ಏಕೈಕ ಸಂಸ್ಥೆಯಾಗಿದೆ. 6 ಸಾವಿರ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದ್ದು, ತಾಲ್ಲೂಕಿನ ಎಲ್ಲ ಸಹಕಾರಿ ಸಂಘಗಳ ಮಾರಾಟಗಾರರು ಗೊಬ್ಬರ ಖರೀದಿಸಿ ರೈತರಿಗೆ ತಲುಪಿಸಬೇಕು’ ಎಂದರು.
‘ಈಗಾಗಲೆ ಇಫ್ಕೋ ಹಾಗೂ ಟಿಎಪಿಸಿಎಂಎಸ್ ಸಹಯೋಗದಲ್ಲಿ 20 ಗ್ರಾಮಗಳ 1,500 ರೈತರ ಜಮೀನುಗಳಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಲಾಗಿದೆ’ ಎಂದು ತಿಳಿಸದರು.
ಇಫ್ಕೋ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಎ.ಎಸ್.ಹರಿಯಪ್ಪ ಮಾತನಾಡಿದರು.
ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣನವರ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಏಕೇಶಪ್ಪ ಬಣಕಾರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಇದ್ದರು.