ಭಟ್ಕಳ: ‘ದೇಶದಲ್ಲಿ ಪ್ರಸಕ್ತ ಬದಲಾಗುತ್ತಿರುವ ಸನ್ನಿವೇಶದಲ್ಲಿ ಮುಸ್ಲಿಮರು ಭಯ ಮತ್ತು ಹತಾಶಗೊಳ್ಳುವುದು ಬೇಡ’ ಎಂದು ಜಮಿಯತುಲ್ ಉಲೇಮಾ ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ಮದನಿ ಹೇಳಿದರು.
ಪಟ್ಟಣದ ಬಂದರ್ ರಸ್ತೆಯಲ್ಲಿ ಈಚೆಗೆ ನವೀಕೃತ ಈದ್ಗಾ ಮೈದಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.‘ನಾವು ಕೇವಲ ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ. ಬೇರೊಬ್ಬರ ಕುರಿತು ಯೋಚಿಸುವುದನ್ನು ನಾವು ಬಿಟ್ಟಿದ್ದೇವೆ. ಇದರಿಂದಾಗಿ ನಮ್ಮ ಸಂಬಂಧಗಳಲ್ಲಿ ಬಿರುಕು ಉಂಟಾಗಿದ್ದು ಪರಸ್ಪರರಲ್ಲಿ ಭಿನ್ನಾಭಿಪ್ರಾಯ ಕಾಣಿಸತೊಡಗಿದೆ’ ಎಂದರು.
‘ಪ್ರವಾದಿ ಮಹಮ್ಮದ್ ಪೈಗಂಬರರು ತಮ್ಮ ಜೀವಿತಾವಧಿಯಲ್ಲಿ ಬೇರೆಯವರನ್ನು ಕುರಿತು ಚಿಂತಿಸುತ್ತಿದ್ದರು. ಅವರಿಗಾಗಿ ಪ್ರಾರ್ಥಿಸುತ್ತಿದ್ದರು. ನಾವಿಂದು ನಮ್ಮ ನೆರೆಹೊರೆಯಲ್ಲಿರುವ ಮುಸ್ಲಿಮೇತರ ಸಮುದಾಯಕ್ಕೆ ನಮ್ಮ ಮನ ಎಂದಾದರೂ ಮಿಡಿಯಿತೆ? ಇಲ್ಲವೆಂದಾದರೆ ನಾವು ಪ್ರವಾದಿಯವರ ದಾರಿಯಲ್ಲಿ ನಡೆಯುತ್ತಿಲ್ಲ ಎಂದರ್ಥ. ನಾವು ಇತರರಿಗಾಗಿ ಮಿಡಿಯುವ ಹೃದಯವನ್ನು ಹೊಂದಬೇಕು’ ಎಂದರು.
‘50 ವರ್ಷಗಳಲ್ಲಿ ಮುಸ್ಲಿಮರಲ್ಲಿನ ಧಾರ್ಮಿಕತೆ ಜಾಗೃತಗೊಂಡಿದೆ. ನಮ್ಮಲ್ಲಿ ಶಿಕ್ಷಣವಿದೆ, ಹಣವಿದೆ. ಆದರೂ ನಾವು ಸಮಾಜದಲ್ಲಿ ನಗಣ್ಯರಾಗಿದ್ದೇವೆ. ಇದಕ್ಕಾಗಿ ನಮ್ಮನ್ನು ಅವಲೋಕನ ಮಾಡಿಕೊಳ್ಳುವ ಸಂದರ್ಭ ಈಗ ಒದಗಿ ಬಂದಿದೆ’ ಎಂದರು.
ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಮೊಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ ಅಧ್ಯಕ್ಷತೆ ವಹಿಸಿದ್ದರು. ಅಲಿಮಿಯಾ ಇಸ್ಲಾಮಿಕ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮೌಲಾನ ಮಹಮ್ಮದ್ ಇಲ್ಯಾಸ್ ನದ್ವಿ, ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಖತೀಬ್ ನದ್ವಿ ಮಾತನಾಡಿದರು.
ಮೌಲ್ವಿ ಶಫಿ ಮಲ್ಪಾ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆ ಪರಿಚಯಿಸಿದರು. ಮೌಲಾನ ತಲ್ಹಾ ರುಕ್ನುದ್ದೀನ್ ಸ್ವಾಗತಿಸಿ, ಪರಿಚಯಿಸಿದರು. ಮೌಲಾನ ಮಕ್ಬೂಲ್ ಅಹ್ಮದ್ ಕೋಬಟ್ಟೆ, ಕಾದಿರ್ ಮೀರಾ ಪಟೇಲ್, ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ಮೌಲಾನ ಅಬ್ದುಲ್ ಅಝೀಮ್ಕಾಜಿಯಾ, ಎಸ್. ಜೆ ಸೈಯ್ಯದ್ ಹಾಶಿಮ್ ಉಪಸ್ಥಿತರಿದ್ದರು.