ಕೆರೂರ: ‘ನಗರದ ಅನೇಕ ಪ್ರಮುಖರ ಪರಿಶ್ರಮದ ಫಲದಿಂದ ಒಂದೂವರೆ ಶತಮಾನದ ಬಳಿಕ ಹೊಸ ರಥೋತ್ಸವ, ವೈವಿಧ್ಯಮಯ ಧಾರ್ಮಿಕ ಆಚರಣೆಗಳ ಮೂಲಕ 15 ದಿನಗಳ ಕಾಲ ಆಚರಿಸುತ್ತಿರುವ ಗ್ರಾಮ ದೇವತೆ ಜಾತ್ರೆಯ ಸದ್ಭಕ್ತರು, ಯಾತ್ರಿಕರಿಗಾಗಿ ಭರಪೂರ ಮನರಂಜನೆ ಕಾರ್ಯ ಕ್ರಮಗಳನ್ನು ಆಯೋಜಿಸಿದೆ’ ಎಂದು ಅಧ್ಯಕ್ಷ ಮಹಾಂತೇಶ ಮೆಣಸಗಿ ತಿಳಿಸಿದರು.
ಜಾತ್ರಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ರಥದ ಶಿಲೆಯ ಚಕ್ರಗಳ ಹಾಗೂ ಕಳಶ ಕುಂಭ, ಹಗ್ಗ ಸಂಗ್ರಹದ ಭವ್ಯ ಮೆರವಣಿಗೆ ಮತ್ತು ಗುಳೇದ ಲಕ್ಕವ್ವನ ಪ್ರತಿಷ್ಠಾಪನೆ, ಜಾತ್ರೆ ನಂತರ ನವ ಹೋಮಗಳ ಆಚರಣೆ, ಅಧ್ಯಾತ್ಮಿಕ ಪ್ರವಚನದ ನಂತರ ಸ್ಥಳೀಯ ಕಲಾಭಿಮಾನಿಗಳಿಗೆ ಮನರಂಜನೆಯ ಸುಗ್ಗಿ ಒದಗಲಿದೆ ಎಂದರು.
17ರ ಬುಧವಾರ ಅವಳಿ ದೇವಿಯರ ಭವ್ಯ ರಥೋತ್ಸವದಲ್ಲಿ 50 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಜಮಾಯಿಸುವ ನಿರೀಕ್ಷೆ ಇದ್ದು ಉತ್ಸವ ಸಮಿತಿ ಧುರೀಣರು ಜಾತ್ರೆಯ ಎಲ್ಲ ಆಚರಣೆಗಳು ಮತ್ತು ಕುಡಿಯುವ ನೀರು, ಅನ್ನದಾಸೋಹ ಮುಂತಾದ ಪ್ರಮುಖ ವ್ಯವಸ್ಥೆಗಳ ನಿರ್ವಹಿಸಲು ಭರದ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.
ಮೇ 18ರ ಗುರುವಾರ ಮಧ್ಯಾಹ್ನ 12 ಕ್ಕೆ ಜಾತ್ರೆ ನಿಮಿತ್ತ ಬೃಹತ್ ಪ್ರಮಾಣದ ಅನ್ನ ಸಂತರ್ಪಣೆ ಆಯೋಜಿಸಿದ್ದು ಅಂದೇ ಸಂಜೆ 5.30 ಕ್ಕೆ ಧರ್ಮಸಭೆ ಇದೆ. ರಾತ್ರಿ 9.30 ಕ್ಕೆ ಬೆಂಗಳೂರಿನ ಪ್ರಸಿದ್ಧ ಕಲಾ ತಂಡದಿಂದ ಸುಮಧುರ ಸಂಗೀತ ಸಂಜೆ ಜರುಗಲಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿಂಗಪ್ಪ ಬಡಿಗೇರ, ಬಿ.ಎಂ. ಬಂತಿ, ವಿಜಯಕುಮಾರ ಐಹೊಳ್ಳಿ, ಬಸವರಾಜ ಕೋಟಗಿ, ವಿರುಪಾಕ್ಷಪ್ಪ ಬಡಿಗೇರ, ಬಸವರಾಜ ಕಪಲಿ, ವಿ.ವಿ. ಕ್ವಾಟಿ, ಡಾ.ಚನ್ನಪ್ಪ ಶಿರೋಳ ಇತರ ಪ್ರಮುಖ ರು ಇದ್ದರು.