ಈಜಿಪ್ಟ್– ಇಸ್ರೇಲ್ ಗಡಿಯಿಂದ ವಿಶ್ವಸಂಸ್ಥೆ ಸೇನೆ ವಾಪಸಿಗೆ ಕರೆ
ಕೈರೋ, ಮೇ 17– ಸಂಯುಕ್ತ ಅರಬ್ ಗಣರಾಜ್ಯ– ಇಸ್ರೇಲ್ ನಡುವಣ 117 ಮೈಲಿ ಉದ್ದದ ಅಂತರ್ರಾಷ್ಟ್ರೀಯ ಗಡಿಯಿಂದ ವಿಶ್ವರಾಷ್ಟ್ರ ಸಂಸ್ಥೆ ಸೇನೆಯನ್ನು ವಾಪಸು ಕರೆಸಿಕೊಳ್ಳಬೇಕೆಂದು ಅರಬ್ ಗಣರಾಜ್ಯವು ಇಂದು ವಿಶ್ವ ರಾಷ್ಟ್ರ ಸಂಸ್ಥೆಯನ್ನು ಕೇಳಿತು.
ಈಜಿಪ್ಟ್–ಇಸ್ರೇಲ್ಗಳ ನಡುವೆ ಮಿಲಿಟರಿ ಕಾರ್ಯಾಚರಣೆ ನಡೆದರೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಅಪಾಯವಾಗದಿರಲೆಂದು ಈಜಿಪ್ಟ್ ಈ ರೀತಿ ಸೂಚನೆ ನೀಡಿದೆ. ಇಸ್ರೇಲ್ ವಿರುದ್ಧದ ‘ಅಂತಿಮ ಹೋರಾಟಕ್ಕೆ’ ಅರಬ್ ರಾಷ್ಟ್ರಗಳೆಲ್ಲವೂ ಸಂಘಟಿತಗೊಳ್ಳಬೇಕೆಂದು ಇಸ್ರೇಲ್ನ ಉತ್ತರ ಗಡಿಯಲ್ಲಿ ಡಮಾಸ್ಕಸ್ ರೇಡಿಯೊ ಕರೆ ನೀಡಿದೆ.
ಚಿಕ್ಕಬಳ್ಳಾಪುರ ತಾಲ್ಲೂಕು ಹೊಸಹಳ್ಳಿಯಲ್ಲಿ ಖೋಟಾ ನೋಟು ತಯಾರಿಕೆ ಪತ್ತೆ
ಚಿಕ್ಕಬಳ್ಳಾಪುರ, ಮೇ 17– ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಹೊಸಹಳ್ಳಿ ಕಲ್ಲಿನ ಮಾಳಿಗೆ ಒಂದರಲ್ಲಿ ಆ ಗ್ರಾಮದ ಇಬ್ಬರ ನೆರವಿನಿಂದ ಸೇಲಂನ ಆರು ಮಂದಿ, ಎರಡು ರೂಪಾಯಿಗಳ ಖೋಟಾ ನೋಟು ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆಯೆಂದು ಮಂಚೇನಹಳ್ಳಿ ಪೋಲೀಸರಿಂದ ನಿನ್ನೆ ಇಲ್ಲಿಗೆ ಬಂದ ಮೊದಲ ವರದಿಗಳು ತಿಳಿಸುತ್ತವೆ.
ಬ್ಯಾಂಕು ರಾಷ್ಟ್ರೀಕರಣಕ್ಕೆ
ನೌಕರರಿಂದ ಚಳವಳಿ ಕಾಕಿನಾಡ, ಮೇ 17– ಬ್ಯಾಂಕುಗಳ ರಾಷ್ಟ್ರೀಕರಣವನ್ನು ಒತ್ತಾಯಪಡಿಸಲು ಅಖಿಲ ಭಾರತ ಬ್ಯಾಂಕು ನೌಕರರ ಸಂಘ ದೇಶಾದ್ಯಂತ ಚಳವಳಿಯೊಂದನ್ನು ಆರಂಭಿಸಲಿದೆ ಎಂದು ಸಂಘದ ಜೊತೆ ಕಾರ್ಯದರ್ಶಿ ಶ್ರೀ ತಾರಕೇಶ್ವರ ಚಕ್ರವರ್ತಿ ತಿಳಿಸಿದರು.
ಆಂಧ್ರಪ್ರದೇಶ ಬ್ಯಾಂಕು ನೌಕರರ ಸಂಘದ ವಾರ್ಷಿಕ ಅಧಿವೇಶನವನ್ನು ಇಲ್ಲಿ ಭಾನುವಾರ ಉದ್ಘಾಟಿಸುತ್ತಿದ್ದ ಅವರು, ದೇಶದಲ್ಲಿ ಬ್ಯಾಂಕು ಉದ್ದಿಮೆ ಬೆಳೆಯಬೇಕಾದರೆ ಅದರ ರಾಷ್ಟ್ರೀಕರಣವಾಗಬೇಕೆಂದೂ ಆರ್ಥಿಕ ಸ್ವಾತಂತ್ರ್ಯದ ಸಾಧನೆಗೂ ರಾಷ್ಟ್ರೀಕರಣವು ಅನಿವಾರ್ಯವೆಂದೂ ನುಡಿದರು.