ಗೌರಿಬಿದನೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ)ಯ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಗ್ಯಾಂಗ್ಮನ್ಗಳಿಗೆ ನೀಡುವ ವೇತನದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ನೌಕರರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹೊರ ಗುತ್ತಿಗೆ ನೌಕರ ರಮೇಶ್ ಮಾತನಾಡಿ, ಬೆಸ್ಕಾಂನಲ್ಲಿ 35 ಮಂದಿ ಗ್ಯಾಂಗ್ಮನ್ಗಳು 10 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.
ಈಗ ಏಕಾಏಕಿ ಕೆಲಸದಿಂದ ತೆಗೆಯಲಾಗಿದೆ. ವರ್ಷದಿಂದ ವೇತನವನ್ನೂ ನೀಡಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತಿದೆ ಎಂದು ಆರೋಪಿಸಿದರು.
‘ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ದಾವಣಗೆರೆ ಮಾರುತಿ ಎಲೆಕ್ಟ್ರಿಕಲ್ ಸಂಸ್ಥೆಯು 35 ನೌಕರರಿಗೆ 5 ತಿಂಗಳ ಪೂರ್ತಿ ವೇತನ ವಿತರಿಸಿದೆ. ಉಳಿದ 7 ತಿಂಗಳ ವೇತನ ಬಾಕಿಯಿದೆ. ಆದರೆ ಕೆಲಸಕ್ಕೆ ಬಂದಿಲ್ಲ ಎಂಬುದನ್ನು ಬೆಸ್ಕಾಂ ಎಂಜಿನಿಯರ್ಗಳು ಹಾಜರಿ ಪುಸ್ತಕದಲ್ಲಿ ತೋರಿಸಿ ನೌಕರರಿಗೆ ಎರಡು– ಮೂರು ತಿಂಗಳ ವೇತನವನ್ನು ಮಾತ್ರ ನೀಡುತ್ತಿದ್ದಾರೆ. ಗುತ್ತಿಗೆ ಸಂಸ್ಥೆ ವೇತನ ನೀಡಿದ್ದರೂ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ. ನೌಕರರ ವೇತನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಗುತ್ತಿಗೆ ಗ್ಯಾಂಗ್ಮನ್ ಮುಖಂಡರು ಆರೋಪಿಸಿದರು.
‘ಗ್ಯಾಂಗ್ಮನ್ಗಳಿಗೆ ಗುತ್ತಿಗೆದಾರ ಸಂಸ್ಥೆ ಮಾಸಿಕ ₹ 5,500 ವೇತನ ನೀಡುತ್ತಿದೆ. ಆದರೆ ಬೆಸ್ಕಾಂ ಅಧಿಕಾರಿಗಳು ₹ 5 ಸಾವಿರ ನೀಡುತ್ತಿದ್ದಾರೆ’ ಎಂದೂ ಅವರು ಆಪಾದಿಸಿದರು.
ಮಾರುತಿ ಎಲೆಕ್ಟ್ರಿಕಲ್ ಸಂಸ್ಥೆಯ ಜಗದೀಶ್ ಮಾತನಾಡಿ, ‘ಬೆಸ್ಕಾಂ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ಯಾಂಗ್ಮನ್ಗಳಿಗೆ ವೇತನ ನೀಡುವುದರಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಯಾವುದೇ ನೌಕರರಿಗೂ ಅನ್ಯಾಯ ಮಾಡಿಲ್ಲ. ಬಾಕಿ ಇರುವ 7 ತಿಂಗಳ ವೇತನವನ್ನು ಶೀಘ್ರ ಪಾವತಿಸಲಾಗುವುದು’ ಎಂದು ಭರವಸೆ ನೀಡಿದರು.
ಗುತ್ತಿಗೆ ನೌಕರರಾದ ಗಂಗಾಧರ, ರವಿ ನಾಯಕ, ಮೂರ್ತಿ, ಮಹೇಶ್, ಮೈಲಾರಿ, ಗಂಗಾಧರಯ್ಯ, ರಾಮಕೃಷ್ಣ ಭಾಗವಹಿಸಿದ್ದರು.