ಮುತ್ತಿನಕೊಪ್ಪ( ಎನ್.ಆರ್.ಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಮರಾಠಿ ಕ್ಯಾಂಪ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ನೀರಿಗಾಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಗಡಿಭಾಗದಲ್ಲಿರುವ ಮರಾಠಿಕ್ಯಾಂಪ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ.ಡವರು, ದಲಿತ ಜನಾಂಗದವರು ಈ ಗ್ರಾಮದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಟಾಸ್ಕ್ ಪೋರ್ಸ್ ನಲ್ಲಿ ಕೊಳವೆ ಬಾವಿ ಕೊರೆಸಿದ್ದರೂ ಸಹ ನೀರು ಲಭ್ಯವಾಗಲಿಲ್ಲ. ಹಾಗಾಗಿ ಖಾಸಗಿಯವರಿಗೆ ಸೇರಿದ ಕೊಳವೆ ಬಾವಿಯಿಂದ ಈ ಗ್ರಾಮಕ್ಕೆ ನೀರನ್ನು ಸರಬರಾಜು ಮಾಡಲಾಗಿತ್ತು. ಪ್ರಸ್ತುತ ನೀರು ಪೂರೈಸಲಾಗುತ್ತಿದ್ದ ಖಾಸಗಿ ಕೊಳವೆ ಬಾವಿ ಸಹ ಬತ್ತಿ ಹೋಗಿರುವುದರಿಂದ ನೀರಿನ ಆಹಾಕಾರ ಉಂಟಾಗಿದೆ. ಇದರಿಂದಾಗಿ ಈ ಗ್ರಾಮದ ಜನರು ಪಕ್ಕದ ಗ್ರಾಮದಿಂದ ನೀರನ್ನು ಆಟೋದಲ್ಲಿ ತರುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಹಳ್ಳ, ಬಾವಿಗಳೂ ಸಹ ಸಂಪೂಣ್ ಬತ್ತಿ ಹೋಗಿವೆ. ಎರಡು ಮೂರು ಕಿ.ಮೀ. ದೂರದಿಂದ ಪ್ರತಿ ನಿತ್ಯ ಕುಡಿಯುವ ನೀರನ್ನು ಆಟೋದಿಂದ ತರಲಾಗುತ್ತಿದೆ. ಇದೇ ನೀರನ್ನು ಜಾನುವಾರುಗಳಿಗೆ ,ಬಟ್ಟೆ ಒಗೆಯಲು ಸಹ ಬಳಸಲಾಗುತ್ತಿದೆ.
ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಇತ್ತೀಚೆಗೆ ಸದಸ್ಯರ ಗಮನಕ್ಕೆ ಬಾರದೇ ಟಾಸ್ಕ್ ಫೋರ್ಸ್ ನಲ್ಲಿ ಕೊಳವೆ ಬಾವಿ ಕೊರೆಸಲಾಗಿದ್ದರೂ ನೀರು ಬಂದಿಲ್ಲ. ಸದಸ್ಯರ ಗಮನಕ್ಕೆ ತಂದಿದ್ದರೆ ನೀರು ಇರುವ ಕಡೆ ಜಾಗವನ್ನು ಗುರುತಿಸಿ ಕೊರೆಸ ಬಹುವುದಿತ್ತು. ಆದರೆ ಏಕಾಏಕಿ ಕೊರೆಸಿರುವುದರಿಂದ ನೀರು ಇಲ್ಲದಂತಾಗಿದೆ ಎಂದು ಸದಸ್ಯರಾದ ಮಹೇಶ್ ಹಾಗೂ ಠಕ್ಕಮ್ಮ ಆರೋಪಿಸಿದ್ದಾರೆ.
ಮರಾಠಿ ಕ್ಯಾಂಪ್ ನಲ್ಲಿ ನೀರಿನ ಸಮಸ್ಯೆ ಉದ್ಭವಿಸಿರುವ ಬಗ್ಗೆ ಎಂಜಿನಿಯರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಸಲು ಸೂಚನೆ ನೀಡಲಾಗಿದೆ. ಇದು ಸಾಧ್ಯವಾಗದಿದ್ದರೆ ಪ್ರತಿ ನಿತ್ಯ ಎಷ್ಟು ನೀರು ಬೇಕಾಗಬಹುದು, ಇದಕ್ಕೆ ತಗಲುವ ವೆಚ್ಚದ ಬಗ್ಗೆ ಕ್ರಿಯಾಯೋಜನೆ ರೂಪಿಸಲು ಸಹ ಆದೇಶಿಸಲಾಗಿದೆ. ಇದನ್ನು ಆದರಿಸಿ ತಹಶೀಲ್ದಾರ್ ರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಪ್ರಜಾವಾಣಿ ಗೆ ತಿಳಿಸಿದರು.
ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
**
ಮರಾಠಿ ಕ್ಯಾಂಪ್ ನಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದರೆ ಕೊಳವೆ ಬಾವಿ ಕೊರೆಸಲಾಗುವುದು.ಇಲ್ಲವೇ ಟ್ಯಾಂಕರ್ ಮೂಲಕ ಪೂರೈಸಲು ಕ್ರಮಕೈಗೊಳ್ಳಲಾಗುವುದು.
-ಡಿ.ಎನ್.ಜೀವರಾಜ್
ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.