ರಾಯಚೂರು: ಆಧುನಿಕ ವಿಧಾನ ಹಾಗೂ ತಾಂತ್ರಿಕತೆ ಬಳಸಿಕೊಂಡು ಕೆಲಸ ನಿರ್ವಹಿಸಿದರೆ ಸಹಕಾರ ಸಂಘಗಳ ಏಳ್ಗೆ ಸಾಧ್ಯವಿದೆ ಎಂದು ಪ್ರತಿನಿಧಿ ಅಪ್ಪಾಜಿ ನಾಡಗೌಡ ಹೇಳಿದರು.
ನಗರದ ಹೈದರಾಬಾದ್ ರಸ್ತೆಯಲ್ಲಿ ಫ್ಯಾಕ್ಟರಿ ಆವರಣದಲ್ಲಿ ನಿರ್ಮಿಸಿದ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ದಿ. ವಿರೂಪಾಕ್ಷಪ್ಪ ಪಾಟೀಲ ಮರ್ಚೆಡ್ ಅವರ ನೂತನ ಪುತ್ಥಳಿಯನ್ನು ಮಂಗಳವಾರ ಅನಾವರಣಗೊಳಿಸಿ ಮಾತನಾಡಿದರು.
ಕೆಲಸದಲ್ಲಿ ಶ್ರದ್ದೆ, ಪ್ರಾಮಾಣಿಕತೆ ಇದ್ದರೆ ಸಹಕಾರ ಸಂಘಗಳು ಬೆಳೆಯಲು ಸಹಕಾರಿಯಾಗಲಿದೆ. ವಿರೂಪಾಕ್ಷಪ್ಪ ಪಾಟೀಲ ಮರ್ಚೆಡ್ ಅವರ ಶ್ರಮದಿಂದ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಅವರ ಶ್ರಮ ಅನನ್ಯವಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಮಾತನಾಡಿ, ಸಂಘಕ್ಕೆ ಸಾಕಷ್ಟು ಆಸ್ತಿ ಮಾಡಿಕೊಟ್ಟಿರುವ ವಿರೂಪಾಕ್ಷಪ್ಪ ಅವರ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಜಯವಂತರಾವ್ ಪತಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, ವಿರೂಪಾಕ್ಷಪ್ಪ ಅವರು ಸಂಘಕ್ಕೆ ₹75 ಕೋಟಿ ಆಸ್ತಿ ಮಾಡಿಕೊಟ್ಟಿದ್ದಾರೆ. ಅವರ ಮಾರ್ಗದಲ್ಲಿ ನಡೆದು 2016–17ನೇ ಸಾಲಿನಲ್ಲಿ ₹51 ಲಕ್ಷ ನಿವ್ವಳ ಲಾಭ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಮಾಜಿ ಸಚಿವ ಎಂ.ಎಸ್.ಪಾಟೀಲ, ವೆಂಕಟರಾವ್ ನಾಡಗೌಡ ಮಾತನಾಡಿದರು. ಮುಖಂಡರಾದ ಬಸವನಗೌಡ ಬ್ಯಾಗವಾಟ್, ಶ್ರೀನಿವಾಸರೆಡ್ಡಿ, ವಿಜಯ ಚಕ್ರವರ್ತಿ ಇದ್ದರು.