ದಾವಣಗೆರೆ: ಹರಿಹರ ತಾಲ್ಲೂಕು ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿ ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ನೂತನ ಮುದ್ರಣಾಲಯ ಬುಧವಾರ ಕಾರ್ಯಾರಂಭ ಮಾಡಿತು.
ಸಂಸ್ಥೆಯ ಸಿಇಒ ಆಗಿ ಈಚೆಗೆ ಅಧಿಕಾರ ವಹಿಸಿಕೊಂಡಿರುವ ಕಾರ್ತಿಕ್ ಬಾಲಕೃಷ್ಣನ್, ದೀಪ ಬೆಳಗಿಸಿ ಪೂಜೆ ಸಲ್ಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಸ್ವಿಚ್ ಒತ್ತಿ ಮುದ್ರಣ ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭ ಮೊದಲ ಮುದ್ರಣವಾಗಿ ಗಣಪತಿಯ ಚಿತ್ರಗಳನ್ನು ಮುದ್ರಿಸಿ ಎಲ್ಲರಿಗೂ ಹಂಚಲಾಯಿತು.
‘ಪ್ರಜಾವಾಣಿ’ ಸಂಪಾದಕ ಕೆ.ಎನ್.ಶಾಂತಕುಮಾರ್ ಕಟ್ಟಡದ ನಾಮಫಲಕ ಅನಾವರಣಗೊಳಿಸಿದರು. ಸಿಇಒ ಕಾರ್ತಿಕ್ ಬಾಲಕೃಷ್ಣನ್ ಮುದ್ರಣಾಲಯದ ಮುಂದೆ ಸಸಿ ನೆಟ್ಟರು.
ಪತ್ರಿಕೆಯ ಆಹ್ವಾನಕ್ಕೆ ಓಗೊಟ್ಟು ಸಮಾರಂಭಕ್ಕೆ ಹಿತೈಷಿಗಳು, ಓದುಗರು, ಅಧಿಕಾರಿಗಳು, ರಾಜಕೀಯ ಮುಖಂಡರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಪತ್ರಿಕೆಯ ಜನಪರ ಕಾಳಜಿಯನ್ನು ಶ್ಲಾಘಿಸಿ, ಮತ್ತಷ್ಟು ಸಮಾಜಮುಖಿಯಾಗಿರಲಿ ಎಂದು ಶುಭ ಹಾರೈಸಿದರು.
ನಮ್ಮ ಊರು ನಮ್ಮ ಬಣ್ಣ: ಪತ್ರಿಕೆಯು ಬಣ್ಣದಲ್ಲಿ ಮೂಡಿಬರುತ್ತಿರುವ ಸಂಕೇತವಾಗಿ ‘ನಮ್ಮ ಊರು ನಮ್ಮ ಬಣ್ಣ’ ಎಂಬ ಘೋಷವಾಕ್ಯದಡಿ ಗೋಡೆಯ ಮೇಲೆ ಚಿತ್ತಾರ ಮೂಡಿಸಲಾಯಿತು. ಸಮಾರಂಭಕ್ಕೆ ಬಂದಿದ್ದ ಗಣ್ಯರು ಹಾಗೂ ಸಂಸ್ಥೆಯ ಸಿಬ್ಬಂದಿ ಬಣ್ಣದಲ್ಲಿ ಕೈ ಅದ್ದಿ ಹಸ್ತದ ಗುರುತು ಮೂಡಿಸಿ ಸಂಭ್ರಮಿಸಿದರು.
ಒಂದೂವರೆ ಎಕರೆ ಪ್ರದೇಶದಲ್ಲಿ ಮುದ್ರಣ ಘಟಕ ನಿರ್ಮಾಣಗೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ವೆಬ್ ಆಫ್ಸೆಟ್ ಯಂತ್ರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮನುಗ್ರಾಫ್ ಸಂಸ್ಥೆಯ ಹೈಲೈನ್ ಯಂತ್ರವನ್ನು ಮುದ್ರಣಕ್ಕೆ ಬಳಸಿ
ಕೊಳ್ಳಲಾಗಿದೆ. ಇದರಿಂದ ಪತ್ರಿಕೆಯ ಗುಣಮಟ್ಟ ಮತ್ತಷ್ಟು ಹೆಚ್ಚಾಗಲಿದೆ.
ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ವರ್ಗದ ನಿಖಿಲ್ ಕುಮಾರ್ ಕೆ.ಎಸ್., ವಿಷ್ಣುಕುಮಾರ್ ಕೆ.ಟಿ., ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ‘ಡೆಕ್ಕನ್ ಹೆರಾಲ್ಡ್’ ಸಹ ಸಂಪಾದಕ ಕೆ.ಸುಬ್ರಹ್ಮಣ್ಯ, ಪ್ರೊಡಕ್ಷನ್ ವಿಭಾಗದ ಮುಖ್ಯ ವ್ಯವಸ್ಥಾಪಕ ವಿ.ಶ್ರೀನಿವಾಸ್, ಜಾಹೀರಾತು ವಿಭಾಗದ ಮುಖ್ಯ ವ್ಯವಸ್ಥಾಪಕ ಸುದೀಪ್ ನಾಗ್, ಪ್ರಸರಣ ವಿಭಾಗದ ಮುಖ್ಯ ವ್ಯವಸ್ಥಾಪಕ ಆಲಿವರ್ ಲೆಸ್ಲಿ ಹಾಜರಿದ್ದರು.
**
ಇಂದು ರೋಡ್ ಷೋ
ಓದುಗರಿಗೆ ಸುದ್ದಿಯ ಜತೆ ಮನರಂಜನೆ ನೀಡುವ ಉದ್ದೇಶದಿಂದ ಗುರುವಾರ ನಗರದಲ್ಲಿ ಡೊಳ್ಳುಕುಣಿತ ಹಾಗೂ ರೋಡ್ ಷೋ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30ಕ್ಕೆ ಖಾಸಗಿ ಬಸ್ ನಿಲ್ದಾಣದಿಂದ ಆರಂಭವಾಗುವ ಮೆರವಣಿಗೆ ನಗರದ ಪ್ರಮುಖ ವೃತ್ತಗಳಲ್ಲಿ ಸಾಗಲಿದೆ. ಸಾರ್ವಜನಿಕರು ಭಾಗವಹಿಸಿ ಜಾನಪದ ಸೊಬಗನ್ನು ಕಣ್ತುಂಬಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.