ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ ಏರ್ ವ್ಯವಸ್ಥೆಗೆ ಮೆಚ್ಚುಗೆಯ ಮಳೆ

ಎರಡು ಲಕ್ಷ ಲೀಟರ್ ನೀರು ಹೊರಹಾಕಿದ ತಂತ್ರಜ್ಞಾನ
Last Updated 18 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬುಧವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಎಲಿಮಿ
ನೇಟರ್ ಪಂದ್ಯದಲ್ಲಿ ಉಭಯ ತಂಡಗಳ ಆಟಕ್ಕಿಂತ ಹೆಚ್ಚು ಗಮನ ಸೆಳೆದ ವಿಷಯ ಏನು ಗೊತ್ತೆ?

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ)  ಇಲ್ಲಿ ಅಳವಡಿಸಿರುವ ಸಬ್‌ ಏರ್ ವ್ಯವಸ್ಥೆ.

ಹೌದು:  ಪಂದ್ಯದ ವೇಳೆ ಸುರಿದ ಮಳೆಯಿಂದಾಗಿ ಅಂಗಳದಲ್ಲಿ ಶೇಖರವಾಗಿದ್ದ ಸುಮಾರು ಎರಡು ಲಕ್ಷ ಲೀಟರ್‌ ನೀರನ್ನು 15 ನಿಮಿಷಗಳಲ್ಲಿ ಹೊರಹಾಕುವಲ್ಲಿ ಈ ವ್ಯವಸ್ಥೆ ಸಫಲವಾಯಿತು. ಅದರೊಂದಿಗೆ ಪಂದ್ಯ ಮರಳಿ ಆರಂಭ ಮಾಡಲೂ ಸಾಧ್ಯವಾಯಿತು.  ರಾತ್ತಿ 1.27ಕ್ಕೆ ಪಂದ್ಯ ಮುಕ್ತಾಯವಾಯಿತು. ಈ ವ್ಯವಸ್ಥೆಯ ಕುರಿತು ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಸೇರಿದಂತೆ ಬಿಸಿಸಿಐ ಮತ್ತು ಹಲವು ಕ್ರಿಕೆಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ್, ‘ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿತ್ತು. ಇದೇ ಮೊದಲ ಬಾರಿ ವ್ಯವಸ್ಥೆಯ ಸಂಪೂರ್ಣ ಬಳಕೆ ಸಾಧ್ಯವಾಯಿತು. ಸುಮಾರು ಮೂರು ತಾಸು ಮಳೆ ಸುರಿದರೂ ಪಿಚ್ ಮತ್ತು ಹೊರಾಂಗಣಗಳು ಹೆಚ್ಚು ಒದ್ದೆಯಾಗಲಿಲ್ಲ. ಸುಮಾರು ಎರಡು ಲಕ್ಷ ಲೀಟರ್ ನೀರನ್ನು ಹೊರ ಹಾಕುವ ಕಾರ್ಯವೂ ಕೇವಲ 15 ನಿಮಿಷಗಳಲ್ಲಿ ನಡೆದುಹೋಯಿತು. ಇದರಿಂದಾಗಿ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಯಿತು. ಈ ವ್ಯವಸ್ಥೆ ಇರದೇ ಹೋಗಿದ್ದರೆ ಪಂದ್ಯ ನಡೆಸುವುದು ಅಸಾಧ್ಯವಾಗಿತ್ತು’ ಎಂದರು.

‘ಹೋದ ತಿಂಗಳು ಸನ್‌ರೈಸರ್ಸ್ ಮತ್ತು ಆರ್‌ಸಿಬಿ ನಡುವಣ ಪಂದ್ಯದ ವೇಳೆಯೂ ಮಳೆ ಇತ್ತು. ಆದರೆ ಆಗ ಸಣ್ಣದಾಗಿ ಮಳೆ ಸುರಿದಿದ್ದರಿಂದ ಸಬ್‌ ಏರ್ ವ್ಯವಸ್ಥೆಯ ಸಂಪೂರ್ಣ ಬಳಕೆಯಾಗಿರಲಿಲ್ಲ.  ಆಗ ಸತತವಾಗಿ ಮಳೆ ಜಿನುಗಿದ್ದರಿಂದ ಪಂದ್ಯವನ್ನು ರದ್ದು
ಗೊಳಿಸಲಾಗಿತ್ತು. ರಭಸದ ಮಳೆ ಬಂದಾಗ ಈ ವ್ಯವಸ್ಥೆಯು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಜರ್ಮನಿ ತಂತ್ರಜ್ಞಾನ ಇದಾಗಿದ್ದು, ವಿಶ್ವದಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಂಡ ಏಕೈಕ ಕ್ರೀಡಾಂಗಣ ನಮ್ಮದಾಗಿದೆ’ ಎಂದರು.

‘ಪಂದ್ಯ ರೆಫರಿ, ಅಂಪೈರ್‌ಗಳು ಮತ್ತು ಉಭಯ ತಂಡಗಳ ಆಟಗಾರರು ಈ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಬಿಸಿಸಿಐ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.  ಕೆಎಸ್‌ಸಿಎ ಫೆಸ್‌ಬುಕ್ ಪುಟದಲ್ಲಿಯೂ ಹಲವಾರು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್, ಕೋಲ್ಕತ್ತ ಕ್ರಿಕೆಟ್ ಸಂಸ್ಥೆಗಳು ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡಿವೆ’ ಎಂದರು.

‘ಕಳೆದ ಐದು ವರ್ಷಗಳಿಂದಲೂ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ. ಸುಮಾರು ಎರಡು ಲಕ್ಷ ಲೀಟರ್ ನೀರು ಅಲ್ಲಿ ಶೇಖರವಾಗುತ್ತದೆ. ಅದನ್ನು ನಾವು ಬಳಸಿಕೊಳ್ಳುತ್ತೇವೆ.  ಅಲ್ಲದೇ ಚರಂಡಿ ನೀರು ಸಂಸ್ಕರಣಾ ಘಟಕಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.  ಸೌರ ವಿದ್ಯುತ್ ಘಟಕವು ಇಲ್ಲಿರುವುದರಿಂದ ಪರಿಸರ ಸ್ನೇಹಿ ಕ್ರೀಡಾಂಗಣವಾಗಿ ಉಳಿದವರಿಗೆ ಮಾದರಿಯಾಗಿದೆ’ ಎಂದು ವಿನಯ್ ಹೇಳಿದರು.

* ಕೆಎಸ್‌ಸಿಎಗೆ ಅನಂತ ಧನ್ಯವಾದಗಳು. ಚಿನ್ನಸ್ವಾಮಿ ಅಂಗಳದಲ್ಲಿ ಅಳವಡಿಸಿರುವ ಆಧುನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಕೆಕೆಆರ್ ತಂಡವು ಕಠಿಣ ಹಾದಿಯಿಂದ ಗೆಲುವಿನತ್ತ ಸಾಗುವಂತಾಯಿತು

–ಗೌತಮ್ ಗಂಭೀರ್, ಕೆಕೆಆರ್ ನಾಯಕ

* ಸಬ್‌ ಏರ್ ವ್ಯವಸ್ಥೆಯನ್ನು ಎಲ್ಲ ಕ್ರೀಡಾಂಗಣಗಳಲ್ಲಿಯೂ ಕಡ್ಡಾಯವಾಗಿ ಅಳವಡಿಸುವಂತಾಗಬೇಕು. ಇದರಿಂದ ಕ್ರಿಕೆಟ್‌ ಮತ್ತುಆಟಗಾರರಿಗೆ ಹಿತವಾಗುವುದು. ಕೆಎಸ್‌ಸಿಎ ಮಾಡಿರುವ ವ್ಯವಸ್ಥೆಯು ಅಮೋಘವಾಗಿದೆ.
–ಹರ್ಷ ಬೋಗ್ಲೆ
ವೀಕ್ಷಕ ವಿವರಣೆಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT