ಈ ಒಂದು ಹಾಡಿನ ಬಿಡುಗಡೆಗಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಕೇವಲ ಹಾಡಿನ ಕುರಿತಾಗಿ ಮಾತ್ರ ಮಾತನಾಡಬೇಕು ಎಂದು ಮೊದಲೇ ನಿರ್ಧರಿಸಿದ್ದರಿಂದಲೋ ಏನೋ, ಚಿತ್ರದ ಯಾವ ಕಲಾವಿದರೂ ಬಂದಿರಲಿಲ್ಲ.
‘ಸರ್ಕಾರಿ ಕೆಲಸ ದೇವರ ಕೆಲಸ’ ಸಿನಿಮಾಗೆ ಆರ್. ರವೀಂದ್ರ ಅವರ ನಿರ್ದೇಶನದ ಈ ಚಿತ್ರಕ್ಕೆ ‘ಮಠ’ ಖ್ಯಾತಿಯ ಗುರುಪ್ರಸಾದ್ ಸಂಭಾಷಣೆ ಬರೆದಿರುವುದು ವಿಶೇಷ. ‘ಸಿನಿಮಾಗೆ ಟ್ಯಾಗ್ಲೈನ್ ಕೊಡುವುದು ಇತ್ತೀಚೆಗೆ ಹುಟ್ಟಿಕೊಂಡ ಪದ್ಧತಿ.
ಆದರೆ ವಿಧಾನಸೌಧಕ್ಕೆ ಬಹು ಹಿಂದೆಯೇ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಟ್ಯಾಗ್ಲೈನ್ ನೀಡಲಾಗಿದೆ. ಅದನ್ನೇ ಚಿತ್ರದ ಶೀರ್ಷಿಕೆಯನ್ನಾಗಿಸಿಕೊಂಡಿದ್ದಾರೆ ಆರ್. ರವೀಂದ್ರ. ಇದು ಸರ್ಕಾರದ ಕಾರ್ಯವೈಖರಿ, ಅಧಿಕಾರಶಾಹಿಯ ವಿರುದ್ಧ ವಿಡಂಬನಾತ್ಮಕ ಕಥೆ ಇರುವ ಸಿನಿಮಾ’ ಎಂದರು ವಿ. ನಾಗೆಂದ್ರಪ್ರಸಾದ್.
ಅಂದಹಾಗೆ ಈ ಸಿನಿಮಾದ ಟ್ಯಾಗ್ಲೈನ್ ‘ಎಲ್ರೂ ... ನನ್ ಮಕ್ಳೇ’. ‘ಇಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ಜನರು ತಮ್ಮ ತಮ್ಮ ಅನುಭವಕ್ಕೆ ಅನುಗುಣವಾಗಿ ತುಂಬಿಕೊಳ್ಳಬಹುದು’ ಎಂದರು ನಿರ್ದೇಶಕ ಆರ್. ರವೀಂದ್ರ. ಈ ಚಿತ್ರದ ವಿಭಿನ್ನ ಶೀರ್ಷಿಕೆಯೇ ಚಂದನ್ ಶೆಟ್ಟಿ ಅವರನ್ನು ಆಕರ್ಷಿಸಿತಂತೆ.
‘ಚಿತ್ರದ ಶೀರ್ಷಿಕೆ ಮತ್ತು ಅದರ ಉದ್ದೇಶದಲ್ಲಿರುವ ಸಾಮಾಜಿಕ ಜಾಗೃತಿಯ ಕಾಳಜಿ ಇವನ್ನೆಲ್ಲ ತಿಳಿದುಕೊಂಡಾಗ ನನ್ನ ಮನಸ್ಸಿನಲ್ಲಿ ರಾಕ್ ಶೈಲಿಯ ಟ್ಯೂನ್ ಹುಟ್ಟಿಕೊಂಡಿತು. ಅದಕ್ಕೆ ನಾಗೇಂದ್ರಪ್ರಸಾದ್ ಪದಗಳನ್ನು ಹೊಸೆದಿದ್ದಾರೆ.
ಈ ಮೊದಲು ಆಲ್ಬಂಗಳನ್ನು ಮಾಡಿದ್ದರೂ ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ಖುಷಿಯಿಂದ ಹೇಳಿಕೊಂಡರು.
ಈಗ ಹದಿನೈದು ವರ್ಷಗಳ ಹಿಂದೆ ಅಶ್ವಿನಿ ಆಡಿಯೊ ಕಂಪೆನಿಯಿಂದಲೇ ಬಿಡುಗಡೆಯಾಗಿ ಉತ್ತರಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ‘ಬೆಳ್ಳುಳ್ಳವ್ವಾ ಬೆಳ್ಳುಳ್ಳಿ’ ಎಂಬ ಹಾಡನ್ನೂ ಈ ಸಿನಿಮಾದಲ್ಲಿ ಮರುರೂಪಿಸಿ ಬಳಸಿಕೊಳ್ಳಲಾಗಿದೆ.
ಇದೀಗ ಸೆನ್ಸಾರ್ ಮಂಡಳಿಯ ಅಂಗಳಲ್ಲಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಸಿನಿಮಾವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.