ಬೆಂಗಳೂರು: ‘ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡುವುದರಿಂದ ಜನರಲ್ಲಿ ಓದುವ ಹವ್ಯಾಸ ಹೆಚ್ಚಾಗುತ್ತದೆ’ ಎಂದು ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು.
ಮಹದೇವಪುರ ಕ್ಷೇತ್ರದ ತೂಬರಹಳ್ಳಿ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸಿರುವ ಗ್ರಂಥಾಲಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಪಾಲಿಕೆಯಿಂದ ₹ 3.29 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಗ್ರಂಥಾಲಯಕ್ಕೆ ಡಿಜಿಟಲ್ ವ್ಯವಸ್ಥೆ ಅಳವಡಿಸಿರುವುದು ಅನೇಕರಿಗೆ ಅನುವಾಗಲಿದೆ. ಅಲ್ಲದೆ, ಯುವಕರನ್ನು ಸೆಳೆಯಲು ಇದು ಸಹಾಯವಾಗಲಿದೆ. ಮತ್ತಷ್ಟು ಗ್ರಂಥಾಲಯಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಗೊಳಿಸಬೇಕು’ ಎಂದು ಹೇಳಿದರು.
‘ಈ ಗ್ರಂಥಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಇಡಲು ನಿರ್ಧರಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯಾಸಕ್ಕೆ ಅಗತ್ಯವಿರುವ ಪುಸ್ತಕಗಳೂ ಇಲ್ಲಿ ಲಭ್ಯವಿವೆ. ಮಕ್ಕಳಿಗೆ ಪ್ರತ್ಯೇಕ ವಿಭಾಗ ಮಾಡಿ ಕಥೆ ಮತ್ತು ಸಾಮಾನ್ಯ ಜ್ಞಾನ ವೃದ್ಧಿಗೆ ಅಗತ್ಯವಿರುವ ಪುಸ್ತಕಗಳನ್ನು ಇರಿಸಲು ಅಧಿಕಾರಿಗಳು ಚಿಂತಿಸಿದ್ದಾರೆ’ ಎಂದು ಹೇಳಿದರು.