ಶಿಡ್ಲಘಟ್ಟ : ತಾಲ್ಲೂಕಿನ ಅರಳಹಳ್ಳಿಯ ರೈತ ವೆಂಕಟೇಶಪ್ಪ ಅವರಿಗೆ ಸೇರಿದ ದ್ರಾಕ್ಷಿ ತೋಟಕ್ಕೆ ದುಷ್ಕರ್ಮಿಗಳು ರಾಸಾಯನಿಕ ಸಿಂಪಡಿಸಿದ್ದು 100ಕ್ಕೂ ಅಧಿಕ ಬಳ್ಳಿಗಳು ನಾಶವಾಗಿವೆ.
ಎರಡೂವರೆ ಎಕರೆಯಲ್ಲಿ ದಿಲ್ ಖುಷ್ ತಳಿಯ 500 ದ್ರಾಕ್ಷಿ ಬಳ್ಳಿಗಳನ್ನು ನಾಟಿ ಮಾಡಿದ್ದರು. ದುಷ್ಕರ್ಮಿಗಳು ಕಳೆ ನಾಶಕ್ಕೆ ಬಳಸುವ ರಾಸಾಯನಿಕ ಸಿಂಪಡಿಸಿಸಿದ್ದು 100ಕ್ಕೂ ಅಧಿಕ ಸಸಿಗಳು ಸುಟ್ಟು ಹೋಗಿವೆ.
‘ದ್ರಾಕ್ಷಿ ಬಳ್ಳಿಗಳನ್ನು ನಾಟಿ ಮಾಡಿ ಬೆಳೆಸಲು ಇದುವರೆಗೂ ₹ 8 ಲಕ್ಷ ಬಂಡವಾಳ ಹೂಡಿದ್ದೆ’ ಎಂದು ರೈತ ವೆಂಕಟೇಶಪ್ಪ ಅಳಲು ತೋಡಿಕೊಂಡರು.
ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ತೋಟಗಾರಿಕೆ ಇಲಾಖೆಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಕಳೆ ನಾಶಕ ಸಿಂಪಡಿಸಿದ್ದರಿಂದ ಬಳ್ಳಿ ನಾಶವಾಗಿವೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುನೇಗೌಡ ಸ್ಪಷ್ಟಪಡಿಸಿದ್ದಾರೆ.