ಪುತ್ತೂರು: ಯಾವ ದೇಶದಲ್ಲಿ ವಿವೇಕಾ ನಂದರ ಆದರ್ಶ ಹಾಗೂ ಮಾತೃ ಭಾಷಾ ಶಿಕ್ಷಣದ ಪ್ರೇಮ ಇದೆಯೋ ಅಂತಹ ದೇಶ ಅಭಿವೃದ್ಧಿಯಾಗುತ್ತದೆ ಎಂದು ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.
ಇಲ್ಲಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬೆಳ್ಳಿಹಬ್ಬದ ಪ್ರಯುಕ್ತ ನೂತನವಾಗಿ ನಿರ್ಮಿಸಲಾದ ‘ಶೇಷಾದ್ರಿ' ಶಾಲಾ ಕಟ್ಟಡವನ್ನು ಗುರು ವಾರ ಸಂಜೆ ಅವರು ಲೋಕಾರ್ಪಣೆ ಗೊಳಿಸಿ, ಶಾಲೆಯ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸ್ವಾಮಿ ವಿವೇಕಾನಂದರು ಈ ದೇಶದ ಶಕ್ತಿ. ಪಾಶ್ಚಿಮಾತ್ಯರಲ್ಲಿ ದರ್ಜಿ ಒಬ್ಬನು ವ್ಯಕ್ತಿತ್ವ ರೂಪಿಸಿದರೆ, ಭಾರತದಲ್ಲಿ ಚಾರಿತ್ರ್ಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಘಂಟಾ ಘೋಷವಾಗಿ ಹೇಳಿದವರು ಅವರು. ಸ್ವಾತಂತ್ರ ಪೂರ್ವದಲ್ಲೇ ಭಾರತದ ಭವಿಷ್ಯವನ್ನು ಕಂಡವರು ವಿವೇಕಾ ನಂದರು. ಡಾ.ಎ.ಪಿ.ಜೆ ಅಬ್ದುಲ್ ಕಲಾಂ 2020ರ ಕನಸನ್ನು ಹರಿಯಬಿಟ್ಟವರು. ಅವರೆಲ್ಲರ ಕನಸು ನನಸಾಗುವ ದಿನಗಳು ಹತ್ತಿರದಲ್ಲಿವೆ’ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಬೋಧನಾ ವಿಭಾಗದ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತ ನಾಡಿ, ಯಾವುದೇ ದೇಶ ಅಭ್ಯುದಯ ಆಗಬೇಕಾದರೆ ಹಿಂದೆ ಆ ದೇಶ ಹೇಗಿತ್ತು ಈಗಿನ ಸವಾಲುಗಳೇನು ಮುಂದಿನ ಕನ ಸೇನು ಎನ್ನುವುದನ್ನು ಗಮನಿಸ ಬೇಕು. ಇಂಗ್ಲಿಷ್ ಮಾನಸಿಕತೆ ಆತಂಕಕಾರಿ. ಇಲ್ಲಿಯ ಸಂಸ್ಕೃತಿ, ಸಂಸ್ಕಾರ ಕೇವಲ ಇಲ್ಲಿನ ಭಾಷೆಯಿಂದ ಮಾತ್ರ ಸಾಧ್ಯ. ಭಾರತೀಯ ಭಾಷೆಗಳ ಸಮಾಧಿಯಲ್ಲಿ ಇಂಗ್ಲಿಷ್ ಕಟ್ಟುವುದು ಒಪ್ಪತಕ್ಕ ವಿಚಾರ ಅಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಟ್ಟಾಗ ಮಾತ್ರ ಮಗುವಿಗೆ ಉಪ ಯೋಗ, ಸಹಾಯ ಆಗಲು ಸಾಧ್ಯ ಎಂಬುದು ವಿಜ್ಞಾನಿಗಳು, ಶಿಕ್ಷಣವೇತ್ತರು ಒಪ್ಪಿಕೊಂಡಿರುವ ಸತ್ಯ. ಈ ಹಿನ್ನಲೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ 25 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಎಸ್.ಜಿ ಅವರು ಶಾಲೆಯ ನೂತನ ಗಣಕ ಯಂತ್ರ ಕೊಠಡಿಯನ್ನು ಉದ್ಘಾಟಿ ಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಬೆಳ್ಳಿ ಹಬ್ಬ ಸಮಿತಿ ಕಾರ್ಯ ದರ್ಶಿ ಹರಿಣಿ ಪುತ್ತೂರಾಯ ಇದ್ದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ನಾಯಕ್ ಅವರು ಸ್ವಾಗ ತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ವಂದಿಸಿದರು. ಶಿಕ್ಷಕಿಯರಾದ ಉಮಾ ಮೋಹನ್ ಹಾಗೂ ವಿದ್ಯಾ ಅನಿಲ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.