ಚಿಟಗುಪ್ಪ: ಪಟ್ಟಣದ ಕೃಷಿ ಉಪ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಅವ್ಯವಸ್ಥೆಯ ಆಗರವಾಗಿದ್ದು, ರೈತರು, ವರ್ತಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
‘ಪ್ರಾಂಗಣದಲ್ಲಿ ಸಿಸಿ ರಸ್ತೆ ಮಾಡಿಲ್ಲ.
ಚರಂಡಗಳ ದುರಸ್ತಿ ಮಾಡಿಲ್ಲ. ಹಳೆ ಬಸ್ ನಿಲ್ದಾಣದ ಎದುರುಗಡೆಯ ವಿವಿಧ ವಾಣಿಜ್ಯ ಮಳಿಗೆಗಳ ನೀರು, ಪಟ್ಟಣದ ಕೊಳಚೆ ನೀರು ಎಪಿಎಂಸಿ ಪ್ರಾಂಗಣದ ಚರಂಡಿಗೆ ಬಂದು ಸೇರುತ್ತಿದೆ.
ಅಲ್ಲದೆ, ಆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿವೆ. ಇದರಿಂದ ನಾಗರಿಕರಿಗೆ ರಸ್ತೆ ಮೇಲೆ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಚರಂಡಿಯಿಂದ ಗಬ್ಬು ವಾಸನೆ ಬರುತ್ತಿದ್ದು, ವ್ಯಾಪಾರಿಗಳಿಗೆ ಕುಳಿತುಕೊಂಡು ವ್ಯಾಪಾರ ಮಾಡಲು ಆಗುತ್ತಿಲ್ಲ.
ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ವರ್ತಕರಾದ ವೆಂಕಟೇಶ್ ಮಂಕಾಲ್, ಮೈಬೂಬ್ ಸಾಬ್ ಸಿಂಧನಕೇರಾ, ದೇವಿಂದ್ರ ಕರಕಾರ್, ಮಹಾವೀರ್ ಚವ್ಹಾಣ ಹೇಳಿದರು.
‘ಪ್ರಾಂಗಣದಲ್ಲಿ ರೈತರ ಧಾನ್ಯ ತುಂಬಿಕೊಂಡು ಬರುವ ಆಟೊ, ಟಂಟಂಗಳಿಗೆ ಎಪಿಎಂಸಿ ಪ್ರಾಂಗಣದಲ್ಲಿ ನಿಲ್ಲಲು ನಿಲ್ದಾಣದ ಸಮಸ್ಯೆ ಇದೆ. ರೈತರಿಗೆ ವಿಶ್ರಾಂತಿ ಪಡೆಯಲು ರೈತ ಭವನ ಬೇಕಿದೆ.
ಉಪಾಹಾರ ಗೃಹ ನಿರ್ಮಾಣ ಮಾಡಬೇಕು. ಬೇರೆ ಊರುಗಳಿಂದ ಬರುವ ರೈತರಿಗೆ, ವರ್ತಕರಿಗೆ ಅನುಕೂಲವಾಗುತ್ತದೆ’ ಎಂದು ವ್ಯಾಪಾರಿಗಳಾದ ರವಿರಾಜ್ ಮಂಕಾಲ್, ಸಿಕಂದರ್ ಭಾಯಿ, ವಿಜಯಕುಮಾರ್ ಮಂಕಾಲ್, ಸಿದ್ದು ರೆಡ್ಡಿ ಒತ್ತಾಯಿಸಿದರು.
‘ಪಟ್ಟಣದ ಉಪ ಕೃಷಿ ಮಾರುಕಟ್ಟೆಗೆ ಸುಮಾರು 40 ಕ್ಕೂ ಹೆಚ್ಚು ಗ್ರಾಮಗಳ ರೈತರು ನಿತ್ಯ ವ್ಯಾಪಾರಕ್ಕೆ ಇಲ್ಲಿಗೆ ಬರುತ್ತಾರೆ. ಹೀಗಾಗಿ ಸಮಿತಿಗೆ ಜಿಲ್ಲೆಯಲ್ಲಿಯೇ ಹೆಚ್ಚಿನ ಆದಾಯ ತಂದುಕೊಡುವ ಮಾರುಕಟ್ಟೆ ಇದಾಗಿದೆ.
ಆದರೂ ಅಧಿಕಾರಿಗಳು ಕಳೆದ ಹತ್ತು ವರ್ಷಗಳಿಂದ ಪ್ರಾಂಗಣದಲ್ಲಿ ಯಾವುದೇ ಪ್ರಗತಿ ಕಾಮಗಾರಿಗಳು ನಡೆಸಿಲ್ಲ. ಇದರಿಂದ ವರ್ತಕರಿಗೆ, ರೈತರಿಗೆ ಬೇಸರ ತಂದಿದೆ’ ಎಂದು ವರ್ತಕರಾದ ಯೂನುಸ್ ಖುರೇಸಿ, ಇರಪಣ್ಣ ಚೆನ್ನೂರ್ ದೂರಿದರು.
‘ಒಂದು ವಾರದಲ್ಲಿ ಪ್ರಾಂಗಣದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ತಪ್ಪಿದಲ್ಲಿ ಎಪಿಎಂಸಿ ಮಾರುಕಟ್ಟೆ ಬಂದ ಮಾಡಿ ಪ್ರತಿಭಟನೆ ಮಾಡುತ್ತೇವೆ’ ಎಂದು ವರ್ತಕ ಶಂಭುಲಿಂಗ್ ಎಚ್ಚರಿಸಿದರು.
*
ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರಂಡಿ ದುರಸ್ತಿ ಆಗಿಲ್ಲ. ಇದರಿಂದ ವರ್ತಕರು, ರೈತರಿಗೆ ಸಮಸ್ಯೆ ಆಗುತ್ತಿದೆ. ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಮಲ್ಲಿಕಾರ್ಜುನ ಪಾಟೀಲ
ಸದಸ್ಯ, ಪುರಸಭೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.