ಕಲಬುರ್ಗಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2016-17ನೇ ಸಾಲಿನ ಶುಲ್ಕ ವಿನಾಯಿತಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿರುವ 33,693 ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಯ ₹16.36 ಕೋಟಿಯನ್ನು ಕಾಲೇಜುಗಳ ಪ್ರಾಚಾರ್ಯರಿಗೆ ಜಮೆ ಮಾಡಲಾಗಿದೆ.
‘ಸಂಬಂಧಪಟ್ಟ ಕಾಲೇಜು ಪ್ರಾಚಾರ್ಯರು ಇಲಾಖೆಯಿಂದ ನೀಡಿದ ಇ-ಫಾಸ್ ಯುಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ತಮ್ಮ ಕಾಲೇಜಿಗೆ ಮಂಜೂರಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ.
‘ಶುಲ್ಕ ವಿನಾಯಿತಿ ಮಂಜೂರಾದ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಶುಲ್ಕ ಪಡೆದಿದ್ದರೆ ಅಂತಹವರಿಗೆ ಬ್ಯಾಂಕ್ ಚೆಕ್/ನಿಪ್ಟ್, ಆರ್.ಟಿ.ಜಿ.ಎಸ್ ಮೂಲಕ ಶುಲ್ಕ ವಿನಾಯಿತಿ ಮೊತ್ತವನ್ನು ಹಿಂದಿರುಗಿಸಿ ವಿದ್ಯಾರ್ಥಿಗಳಿಂದ ಸ್ವೀಕೃತಿ ಪಡೆದು ಅದನ್ನು ನಮ್ಮ ಕಚೇರಿಗೆ ಸಲ್ಲಿಸಬೇಕು’ ಎಂದು ಅವರು ಹೇಳಿದ್ದಾರೆ.ತಪ್ಪಿದರೆ ಕಾಲೇಜಿನ ವಿರುದ್ಧ ಶಿಸ್ತು ಕ್ರಮ ಕೈಗೂಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ವಿದ್ಯಾಸಿರಿ: ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2016-17ನೇ ಸಾಲಿನ ‘ವಿದ್ಯಾಸಿರಿ’ ಯೋಜನೆಯಡಿ ಆಯ್ಕೆಯಾದ 5,369 ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್ ಮೂಲಕ ಒಟ್ಟು ₹4.31 ಕೋಟಿ ಜಮೆ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿ ಹಣ ಜಮೆ ಆಗಿರುವುದನ್ನು ದೃಢೀಕರಿಸಿಕೊಳ್ಳಬೇಕು’ ಎಂದು ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ.
‘ಒಂದು ವೇಳೆ ತಮ್ಮ ಖಾತೆಗೆ ಹಣ ಜಮೆಯಾಗದಿದ್ದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಾರ್ಯಾಲಯ, ರೈಲ್ವೆ ನಿಲ್ದಾಣ ಹಿಂದುಗಡೆ, ತಾರಫೈಲ್ 8ನೇ ಕ್ರಾಸ್, ಡೆಂಕನಬಾವಿ ಹತ್ತಿರ, ಡಿ.ದೇವರಾಜ ಅರಸು ಭವನ, ಕಲಬುರ್ಗಿ ಸಂಪರ್ಕಿಸಬೇಕು’ ಎಂದು ಅವರು ತಿಳಿಸಿದ್ದಾರೆ.